ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ವೇಗ ಹೆಚ್ಚಳ
ಬೆಂಗಳೂರು, ಜೂ.29: ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡುವ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ವೇಗ ಹೆಚ್ಚಿಸಲಾಗುತ್ತಿದ್ದು, 1.55 ಗಂಟೆಯಲ್ಲಿ ಎರಡು ನಗರಗಳ ನಡುವೆ ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿರುವ ನೈಋತ್ಯ ರೈಲ್ವೆಯು, ಮೈಸೂರಿನಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು ಸಂಜೆ 4.10ಕ್ಕೆ ಬೆಂಗಳೂರು ತಲುಪಲಿದೆ. ಇದಷ್ಟೇ ಅಲ್ಲದೆ, ಇನ್ನೂ ಹಲವು ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜು.1 ರಿಂದಲೇ ಎಲ್ಲ ರೈಲುಗಳ ವೇಗ ಹೆಚ್ಚಳವಾಗಲಿದೆ. ಚೆನ್ನೈ-ಮೈಸೂರು ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವೇಗವನ್ನು ಗಂಟೆಗೆ 10 ನಿಮಿಷ ಹೆಚ್ಚಿಸಿದ್ದರೆ, ಹುಬ್ಬಳ್ಳಿ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ವೇಗವನ್ನು ಗಂಟೆಗೆ 15 ನಿಮಿಷಗಳಷ್ಟು ಹೆಚ್ಚಳ ಮಾಡಲಾಗಿದೆ.
ಇನ್ನುಳಿದಂತೆ ಹೊಸದಾಗಿ ಆರಂಭಿಸಲಾದ ಕಾಚಿಗೂಡ್ ಎಕ್ಸ್ಪ್ರೆಸ್ ಮೈಸೂರು ಮತ್ತು ಬೆಂಗಳೂರು ನಡುವೆ 15 ನಿಮಿಷ ವೇಗ ಹೆಚ್ಚಿಸಲಾಗಿದೆ. ಹಳಿಗಳ ದ್ವಿಗುಣ ಹಾಗೂ ವಿದ್ಯುದೀಕರಣ ಸೇರಿದಂತೆ ಹಲವು ಹಂತಗಳಲ್ಲಿ ಸುಧಾರಣೆ ಕೈಗೊಂಡಿದ್ದರಿಂದ ರೈಲುಗಳ ವೇಗ ಹೆಚ್ಚಳ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







