ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು, ಜೂ.29: ಬಿಬಿಎಂಪಿಯ ಆಡಳಿತದ ಮೇಲೆ ಹೆಚ್ಚು ಒತ್ತಡ ಬೀಳುತ್ತಿರುವುದರಿಂದ ನಗರದ ಎಂಟು ವಲಯಗಳಿಗೆ ಹೆಚ್ಚು ಶಕ್ತಿ ನೀಡಿ, ಆಡಳಿತ ವಿಕೇಂದ್ರಿಕರಣ ಮಾಡುವತ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಮಹದೇವಪುರ ವಲಯದಲ್ಲಿ ಎಂಎಲ್ಆರ್ ಕನ್ವೆನ್ಷನ್ ಹಾಲ್ನಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಎಲ್ಲ ಸಮಸ್ಯೆಗೂ ಕೂಡಲೇ ಸ್ಪಂದಿಸಿದ ಪರಮೇಶ್ವರ್ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಿ.ಎಸ್.ಪಾಟೀಲ್ ಸಮಿತಿ, ಐದು ಕಾರ್ಪೋರೇಷನ್ ಮಾಡಲು ವರದಿ ನೀಡಿದ್ದು, ಸರಕಾರದ ಮುಂದಿದೆ. ಆದರೆ, ಆಡಳಿತವನ್ನು ವಿಕೇಂದ್ರಿಕರಣ ಮಾಡುವ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ನಗರ ಬೆಳೆಯುತ್ತಿರುವುದರಿಂದ ಬಿಬಿಎಂಪಿ ಆಡಳಿತದ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ಇರುವ ಎಂಟು ವಲಯಗಳಿಗೆ ಹೆಚ್ಚು ಅಧಿಕಾರ ನೀಡಿ, ಆಯುಕ್ತರ ವರೆಗೆ ಬಾರದ ರೀತಿ ವಲಯದ ಜಂಟಿ ಆಯುಕ್ತರೇ ನಿರ್ವಹಣೆ ಮಾಡುವ ಅಧಿಕಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜನಸ್ಪಂದನಕ್ಕೆ ಉತ್ತಮ ಸ್ಪಂದನೆ: ಸರಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆ ಉತ್ತಮವಾಗಿರಬೇಕು, ಜನರ ಸಮಸ್ಯೆಯನ್ನು ಸರಕಾರವೇ ನೇರ ಕೇಳುವಂತಾಗಲಿ ಎಂದು ನಾಲ್ಕು ತಿಂಗಳ ಹಿಂದೆಯೇ ಜನಸ್ಪಂದನ ಕಾರ್ಯಕ್ರಮ ತರಲಾಯಿತು. ಚುನಾವಣೆ ಬಂದ ಕಾರಣಕ್ಕೆ ಈ ಕಾರ್ಯಕ್ರಮ ತಡವಾಯಿತು. ಇಂದು ನಡೆದ ಜನಸ್ಪಂದನೆಯಲ್ಲಿ ಹಲವರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದು, ಎಲ್ಲರ ಸಮಸ್ಯೆಯನ್ನು ಖುದ್ದಾಗಿ ಬರೆದುಕೊಂಡಿದ್ದೇನೆ. ಈ ಎಲ್ಲರ ಸಮಸ್ಯೆಗೂ ಪರಿಹಾರ ಸಿಗಲಿದೆ. ಬಹುತೇಕ ಅಧಿಕಾರಿಗಳು ಕೆಲಸ ಮಾಡಿದ್ದರೂ, ಇನ್ನೂ ಕೆಲವರು ಕೆಲಸ ಮಾಡಲ್ಲ. ಅವರಿಗೂ ಎಚ್ಚರಿಕೆ ನೀಡಿದ್ದೇನೆ ಎಂದರು.
ಬೆಂಗಳೂರು ಬೆಳೆದಂತೆ ಅಭಿವೃದ್ಧಿ ಕೆಲಸವೂ ಆಗಬೇಕಿದೆ. 110 ಹಳ್ಳಿಗಳನ್ನು ಒಳಪಡಿಸಲಾಯಿತು. ಈ ಹಳ್ಳಿಗಳ ಅಭಿವೃದ್ಧಿಗೆ ಪ್ರತ್ಯೇಕ ಹಣ ಮೀಸಲಿಡಲಾಗಿದೆ. 1,450 ಎಂಎಲ್ಡಿ ನೀರು ನಗರದಲ್ಲಿ ಬಳಕೆ ಆಗುತ್ತಿದೆ. ಬೋರ್ವೆಲ್ನಲ್ಲಿ 500 ಎಂಎಲ್ಡಿ ನೀರು ಸಿಗುತ್ತಿದೆ. ಆದರೂ ಬೆಂಗಳೂರಿನ 70 ಭಾಗಕ್ಕೆ ಕಾವೇರಿ ನೀರು ಕೊಡಲಾಗುತ್ತಿದೆ. ಉಳಿಕೆ ಪ್ರದೇಶಕ್ಕೆ ನೀರು ಕೊಡಬೇಕಿದೆ. 5 ನೇ ಹಂತದ ಕಾವೇರಿ ನೀರು ಯೋಜನೆ 2 ವರ್ಷದೊಳಗೆ ಪೂರ್ಣವಾಗಲಿದೆ. ಪ್ರಸ್ತುತ ಕೆಆರ್ಎಸ್ನಲ್ಲಿ 79.56 ಅಡಿ ನೀರು ಲಭ್ಯವಿದೆ. 75 ಅಡಿಗೆ ಬಂದರೆ ಕುಡಿಯಲು ಸಮಸ್ಯೆ ಆಗಲಿದೆ. ಒಂದು ವೇಳೆ ಮಳೆಯಾಗದೇ ಹೋದಲ್ಲಿ ಜುಲೈ 31 ರೊಳಗೆ 75 ಅಡಿ ಬರುವ ಸಾಧ್ಯತೆ ಇದೆ. ಹೀಗಾಗಿ ಕುಡಿಯುವ ನೀರನ್ನು ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇತರೆ ಮೂಲದಿಂದ ನೀರು ತರಲು ಮುಂದಾಗಿದ್ದು, 13,500 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಎರಡೂವರೆ ಟಿಎಂಸಿ ನೀರು ತರಲಾಗುವುದು. ಜೊತೆಗೆ ಲಿಂಗನಮಕ್ಕಿಯಿಂದ 10 ಟಿಎಂಸಿ ನೀರು ತರಲು ಯೋಜಿಸಲಾಗಿದೆ ಎಂದರು.
ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಕಡಿವಾಣ ಹಾಕಲು ಚಿಂತಿಸಿದ್ದೇವೆ. ಮುಂದಿನ ವರ್ಷದೊಳಗೆ ಎಲ್ಲಾ ಬೀದಿ ದೀಪಗಳಿಗೆ ಎಲ್ಇಡಿ ಬಲ್ಬ್ ಹಾಕಿದರೆ ಶೇ.85 ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಪ್ರಸ್ತುತ ಬಿಬಿಎಂಪಿ ತಿಂಗಳಿಗೆ 23 ಕೋಟಿ ಕೋಟಿ ರೂ. ವಿದ್ಯುತ್ ಬಿಲ್ಗಾಗಿಯೇ ವ್ಯಯಿಸುತ್ತಿದೆ ಎಂದರು.
ಅಧಿಕಾರಿಗಳು ಕೆಲಸ ಮಾಡದಿದ್ದರೆ ಇಲ್ಲಿ ಇರಬೇಡಿ. ಇಲ್ಲಿ ಇರೋಕೆ ಅರ್ಹರೂ ಅಲ್ಲ. ಕಸ ತೆರವು ಮಾಡುವುದು, ಕೇಬಲ್ ತೆರವು ಈ ಎಲ್ಲಾ ಕೆಲಸ ಯಾರು ಮಾಡಬೇಕು. ಅಧಿಕಾರಿಗಳು ಸೂಕ್ತವಾಗಿ ಕೆಲಸ ಮಾಡಲು ಆಗುವುದಿಲ್ಲವೇ? ನಿಮ್ಮಜವಾಬ್ದಾರಿಯನ್ನು ನೀವು ಸರಿಯಾಗಿ ನಿಭಾಯಿಸಿ. ಈ ಬಾರಿ ಮಳೆ ಬಂದಾಗ ಪ್ರವಾಹ ಆದರೆ ಸಂಬಂಧಪಟ್ಟ ಅಧಿಕಾರಿಯನ್ನು ಸುಮ್ಮನೆ ಬಿಡಲ್ಲ. ಜನಮನ್ನಣೆ ರೀತಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಸಾರ್ವಜನಿಕರು ಸಾಕಷ್ಟು ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದೀರ. ಈ ಸಭೆಯನ್ನು ನಾಲ್ಕು ತಿಂಗಳ ನಂತರ ಇದೇ ಜಾಗದಲ್ಲಿ ಮಾಡುತ್ತೇನೆ. ಎಷ್ಟು ಸಮಸ್ಯೆ ನೀಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದರು. ರಾಜಕಾಲುವೆ ಒತ್ತುವರೆ ಬಗ್ಗೆ ದೂರು ಬಂದಿದೆ. ಎಷ್ಟೆ ಬಲಿಷ್ಠವಾಗಿದ್ದರೂ ರಾಜಕಾಲುವೆ ಒತ್ತುವರಿ ತೆರವು ಕೆಲಸ ಮಾಡಲಾಗುವುದು. ಮುಂದಿನ ವಾರದಿಂದಲೇ ಈ ಕೆಲಸ ಪ್ರಾರಂಭ ಮಾಡಲಾಗುತ್ತೆ ಎಂದರು. ಸೊಳ್ಳೆ ಓಡಿಸಲು ಫಾಗಿಂಗ್ ಮಷಿನ್ ತರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವಸಂಧ್ರ ವಾರ್ಡ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಣ ಒದಗಿಸಿಕೊಡಲಾಗುವುದು, ರಸ್ತೆ ಅಗಲೀಕರಣ, ಕುಡಿಯುವ ನೀರು ಪೂರೈಕೆ, ಬೀದಿದೀಪ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದರು. ಮಹದೇವಪುರ ವಲಯ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ನ ನಿವಾಸಿಗಳು ಆಗಮಿಸಿ ಸಮಸ್ಯೆ ತೋಡಿಕೊಂಡರು.
ಸಮಾರಂಭದಲ್ಲಿ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೆ ಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್,ಬಿಡಿಎ ಆಯುಕ್ತೆ ಮಂಜುಳಾ, ಶಾಸಕ ಭೈರತಿ ಬಸವರಾಜ್, ಎಂಎಲ್ಸಿ ನಾರಾಯಣ ಸ್ವಾಮಿ, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ, ಎಸ್ಕಾಂ, ಬಿಡಿಎ ಅಧಿಕಾರಿಗಳು ಪಾಲ್ಗೊಂಡಿದ್ದರು.







.jpeg)



