ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಸಚಿವ ಖಾದರ್ ಚಾಲನೆ

ಉಳ್ಳಾಲ, ಜೂ. 30: ಆರೋಗ್ಯ ಸೇವೆಗೆ ಸರಕಾರದಿಂದ ವಿವಿಧ ಯೋಜನೆಗಳಿದ್ದು, ಇದಕ್ಕೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳು ಗ್ರಾ ಮೀಣ ಪ್ರದೇಶದ ಜನರ ಆರೋಗ್ಯ ಕಾಳಜಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದ್ದು, ನೂತನವಾಗಿ ಆರಂಭಗೊಂಡ ಕಣಚೂರು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಜನವನ್ನು ಈ ಪ್ರದೇಶದ ಜನರು ಪಡೆದುಕೊಳ್ಳಬೇಕು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಡಿ.ಖಾದರ್ ಅಭಿಪ್ರಾಯಪಟ್ಟರು.
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ವತಿಯಿಂದ ತಲಪಾಡಿ ಗ್ರಾಮದ ಪಿಲಿಕೂರು ಬಳಿ ನೂತನವಾಗಿ ಸ್ಥಾಪಿಸಿದ ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಚಾಲನೆ ಇದರ ಪ್ರಯುಕ್ತ ಸಮುದಾಯ ಆರೋಗ್ಯ ವಿಭಾಗದ ಆಶ್ರಯ ದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾ ಮೀಣ ಪ್ರದೇಶದಲ್ಲಿ ಬಂಡವಾಳ ಹೂಡಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವವರು ಕಡಿಮೆ ಅದರಲ್ಲೂ ಆರೋಗ್ಯಸೇವೆಯನ್ನು ಜನರಿಗೆ ಉಚಿತವಾಗಿ ನೀಡುವ ಕಾರ್ಯ ಕಳೆದ ಕೆಲವು ವರ್ಷಗಳಿಂದ ದೇರಳಕಟ್ಟೆಯಲ್ಲಿ ಕಣಚೂರು ಮೋನು ನಡೆಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಪಿಲಿಕೂರುನಂತಹ ಪ್ರದೇಶದಲ್ಲಿ ತೆರದಿರುವ ಆರೋಗ್ಯ ಕೇಂದ್ರಕ್ಕೆ ಎಲ್ಲರ ಸಹಕಾರ ಅಗತ್ಯ, ಈಗಾಗಲೇ ಈ ಪ್ರದೇಶದಲ್ಲಿ ಎಂ.ಬಿ. ಪುರಾಣಿಕ್ ನೇತೃತ್ವದಲ್ಲಿ ಶಾರದಾ ಶಿಕ್ಷಣ ಸಂಸ್ಥೆಗಳನ್ನು ಆರಂಬಿಸಿದಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಯನ್ನು ಆರಂಬಿಸುವ ಮೂಲಕ ಈ ಪ್ರದೇಶದ ಆಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈಪ್ರದೇಶ ಅಭಿವೃದ್ಧಿ ಹೊಂದುವುದರಿಂದ ಸ್ಥಳೀಯರಿಗೆ ವ್ಯಾಪಾರ, ಉದ್ಯೋಗ ಸೇರಿದಂತೆ ಆರ್ಥಿಕ ಅಭಿವೃದ್ಧಿಯ ಕೇಂದ್ರವಾಗುತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಮೋನು ಮಾತನಾಡಿ ತಮ್ಮ ಹಿರಿಯರು ನೆಲೆಸಿದ ಈ ಜಾಗದಲ್ಲಿ ಹಿರಿಯರ ಹೆಸರಿನಲ್ಲಿ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಲ್ಲಿದ್ದೆ. ಇದೀಗ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಸಮಾಜದ ಆರೋಗ್ಯ ಸೇವೆಗೆ ಈ ಕೊಡುಗೆಯನ್ನು ನೀಡುತ್ತಿದ್ದು ಎಲ್ಲಾ ಧರ್ಮದ ವರ್ಗದವರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಲ್ಯಾಬೋರೇಟರಿ ಉದ್ಘಾಟಿಸಿದರು. ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಮೆಡಿಸಿನ್ ವಿಭಾಗವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯೆ ಅಕ್ಷತಾ ಪಿಲಿಕೂರು ರಕ್ತದಾನ ಶಿಬಿರ ಉದ್ಘಾಟಿಸಿದರು.
ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂಬ. ಬಿ. ಪುರಾಣಿಕ್, ತಲಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಮಸೀದಿ ಉಪಾಧ್ಯಕ್ಷ ಮಹಮ್ಮದ್ ಕುಂಞ ತಲಪಾಡಿ ಜುಮಾ ಮಸೀದಿ ಖತೀಬರಾದ ಝೈನಿ ಖಾಮಿಲ್ , ತಾ.ಪಂ. ಸದಸ್ಯ ಅಬೂಬಕ್ಕಾರ್ ಸಿದ್ದಿಕ್, ಗ್ರಾಮ ಪಂಚಾಯತ್ ಸದಸ್ಯರಾದ ಫಯಾಝ್ ಪಿಲಿಕೂರು, ಫಾರೂಕ್, ರಕ್ತದಾನ ಶಿಬಿರದ ಸಂಯೋಜಕ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಮಹಮ್ಮದ್ ಮುಸ್ತಾಫ, ಮಾಜಿ ಸದಸ್ಯ ಖಾದರ್ ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಪಕ್ಕಳ, ಗಣೇಶ್ ಶೆಟ್ಟಿ, ಗೋಪಾಲ ಶೆಟ್ಟಿ, ಇಸ್ಮಾಯಿಲ್, ಖಾದರ್ , ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ರಹೆಮಾನ್, ಡೀನ್ ಡಾ. ಎಚ್. ಎಸ್. ವಿರೂಪಾಕ್ಷ , ವೈಸ್ ಡೀನ್ ಡಾ. ಶ್ರೀಶಾ ಖಂಡಿಗೆ, ಕಣಚೂರು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಕರ್ನಲ್ ಡಾ. ಕೆ.ಜಿ.ಕಿರಣ್ , ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್, ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.
ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರದ ಪಿಲಿಕೂರು ಇದರ ಮುಖ್ಯಸ್ಥ ಡಾ. ಶ್ರೀವತ್ಸ ಪ್ರಸ್ತಾವನೆಗೈದರು. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಸೋಶಿಯಲ್ ವರ್ಕರ್ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.







