ಅಧಿಕಾರಿಗೆ ಬ್ಯಾಟ್ ನಿಂದ ಥಳಿಸಿದ ಪುತ್ರನನ್ನು ‘ಕಚ್ಛಾ ಕಿಲಾಡಿ’ ಎಂದು ಸಮರ್ಥಿಸಿದ ಬಿಜೆಪಿ ನಾಯಕ ವಿಜಯವರ್ಗಿಯಾ

ಇಂದೋರ್, ಜು.1: ಮುನಿಸಿಪಲ್ ಅಧಿಕಾರಿಗೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆಗೈದು ಜೈಲುಪಾಲಾಗಿ ಬಿಡುಗಡೆಗೊಂಡಿರುವ ತಮ್ಮ ಪುತ್ರ, ಇಂದೋರ್ ಕ್ಷೇತ್ರದ ಶಾಸಕ ಆಕಾಶ್ ವಿಜಯ್ ವರ್ಗಿಯಾರನ್ನು ಅವರ ತಂದೆ, ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಪುತ್ರ ಕಚ್ಛಾ ಖಿಲಾಡಿ (ಅನನುಭವಿ) ಎಂಬ ಸಬೂಬನ್ನೂ ನೀಡಿದ್ದಾರಲ್ಲದೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾದ ಈ ಹಲ್ಲೆ ಪ್ರಕರಣ `ದೊಡ್ಡ ವಿಚಾರವೇನೂ' ಅಲ್ಲ ಎಂದೂ ತಿಳಿಸಿದ್ದಾರೆ.
ಮುನಿಸಿಪಲ್ ಅಧಿಕಾರಿಗಳು ಅಹಂಕಾರ ತೋರ್ಪಡಿಸಬಾರದಾಗಿತ್ತು ಹಾಗೂ ಜನಪ್ರತಿನಿಧಿಯಾಗಿರುವ ತಮ್ಮ ಪುತ್ರನ ಮಾತುಗಳನ್ನು ಆಲಿಸಬೇಕಿತ್ತು ಎಂದೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯ್ ವರ್ಗಿಯಾ ಹೇಳಿಕೊಂಡಿದ್ದಾರೆ.
ಶುಕ್ರವಾರ ಬಂಧಿತನಾಗಿದ್ದ ಆಕಾಶ್ (34) ರವಿವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಾಗ ಆತನ ಕುಟುಂಬ ವರ್ಗ ಹಾಗೂ ಬೆಂಬಲಿಗರು ಭವ್ಯ ಸ್ವಾಗತ ನೀಡಿದರಲ್ಲದೆ, ಆತ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಲಾರ್ಪಣೆಯೂ ನಡೆಯಿತು. ಇಂದೋರ್ ಬಿಜೆಪಿ ಕಚೇರಿ ಹಾಗೂ ಶಾಸಕನ ಗೃಹ ಕಚೇರಿಯಲ್ಲಿ ಸಂಭ್ರಮಾಚರಣೆಯೂ ನಡೆಯಿತು.
ಕಳೆದ ಬುಧವಾರ ನಡೆದ ಘಟನೆಯ ವಿಡಿಯೋದಲ್ಲಿ ಕಾಣಿಸುವಂತೆ ಆಕಾಶ್ ವಿಜಯ್ ವರ್ಗಿಯಾ ಮತ್ತಾತನ ಬೆಂಬಲಿಗರು ಪೊಲೀಸರು ಹಾಗೂ ಟಿವಿ ವರದಿಗಾರರ ಕಣ್ಣೆದುರಿಗೇ ಬ್ಯಾಟ್ ಹಿಡಿದು ಅಧಿಕಾರಿಯನ್ನು ಬೆಂಬತ್ತಿದ್ದರು. ನಂತರ ಶಾಸಕ ಆ ಅಧಿಕಾರಿಗೆ ಬ್ಯಾಟ್ ನಿಂದ ಹೊಡೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಸಂತ್ರಸ್ತ ಅಧಿಕಾರಿ ಇಂದೋರ್ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ತಂಡದ ಭಾಗವಾಗಿದ್ದರು. ವಸತಿ ಕಟ್ಟಡದಲ್ಲಿದ್ದ ಮಹಿಳೆಯರನ್ನು ಅಧಿಕಾರಿಗಳ ತಂಡ ಎಳೆದೊಯ್ದು ನಿಂದಿಸಿದೆ ಎಂದು ಆಕಾಶ್ ವಿಜಯ್ ವರ್ಗಿಯಾ ಆರೋಪಿಸಿದ್ದರು.
“ನನ್ನ ಕೃತ್ಯದಿಂದ ನನ್ನಲ್ಲಿ ತಪ್ಪಿತಸ್ಥ ಭಾವನೆಯಿಲ್ಲ ಹಾಗೂ ನನಗೆ ಮುಜುಗರವಾಗಿಲ್ಲ. ಏಕೆಂದರೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ನಾನು ಹಾಗೆ ಮಾಡಿದ್ದೇನೆ'' ಎಂದು ಜೈಲಿನಿಂದ ಹೊರ ಬಂದ ನಂತರ ಆಕಾಶ್ ವಿಜಯ್ ವರ್ಗಿಯಾ ಹೇಳಿದ್ದರು.