ಸಾಲ ವಸೂಲಿಗೆ ಬೌನ್ಸರ್ಗಳನ್ನು ನೇಮಿಸುವ ಅಧಿಕಾರ ಬ್ಯಾಂಕ್ಗಳಿಗಿಲ್ಲ: ಸರಕಾರ

ಹೊಸದಿಲ್ಲಿ, ಜು.1: ಗ್ರಾಹಕರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಬೌನ್ಸರ್ಗಳನ್ನು ನೇಮಿಸಿಕೊಳ್ಳುವ ಅಧಿಕಾರ ಯಾವುದೇ ಬ್ಯಾಂಕ್ಗಳಿಗಿಲ್ಲ ಎಂದು ಕೇಂದ್ರದ ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸಾಲ ವಸೂಲಾತಿಗೆ ವಸೂಲಿ ಏಜೆಂಟರನ್ನು ಬಳಸುವುದಕ್ಕೆ ಆರ್ಬಿಐ ಸ್ಪಷ್ಟವಾದ ನಿರ್ದೇಶನ ನೀಡಿದ್ದು, ಸೂಕ್ತ ಪೊಲೀಸ್ ಪರಿಶೀಲನೆ ಹಾಗೂ ಸಂಬಂಧಿತ ನಿಯಮಗಳನ್ನು ಅನುಸರಿಸಿದ ಬಳಿಕ ವಸೂಲಿ ಏಜೆಂಟರನ್ನು ನೇಮಿಸಿಕೊಳ್ಳಬಹುದು ಎಂದು ಎಲ್ಲಾ ಬ್ಯಾಂಕ್ಗಳಿಗೆ ಸುತ್ತೋಲೆ ಕಳಿಸಿದೆ. ‘ಸಾಲ ನೀಡುವವರಿಗೆ ನ್ಯಾಯಯುತ ನಡವಳಿಕೆಗಳ ಮಾರ್ಗದರ್ಶಿ ಸೂತ್ರ’ವನ್ನು ಆರ್ಬಿಐ ಜಾರಿಗೊಳಿಸಿದ್ದು, ಇದನ್ನು ಬ್ಯಾಂಕ್ಗಳ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಿ ಅಳವಡಿಸಿಕೊಳ್ಳಬೇಕು.
ಈ ಮಾರ್ಗದರ್ಶಿ ಸೂತ್ರದಲ್ಲಿ ಸಾಲ ವಸೂಲಿ ಮಾಡುವ ಸಂದರ್ಭ ಅನಗತ್ಯ ಕಿರುಕುಳ, ದೌರ್ಜನ್ಯ ನೀಡುವುದು, ಅಕಾಲದಲ್ಲಿ (ಹೊತ್ತಲ್ಲದ ಹೊತ್ತಿನಲ್ಲಿ) ಸಾಲ ತಗೊಂಡವರಿಗೆ ಕರೆ ಮಾಡಿ ತೊಂದರೆ ನೀಡುವುದು, ಸಾಲ ವಸೂಲಿಗೆ ತೋಳ್ಬಲ (ಬೌನ್ಸರ್ಗಳನ್ನು) ಬಳಸುವುದು ಇತ್ಯಾದಿ ಕ್ರಮಗಳನ್ನು ಸುತ್ತೋಲೆಯಲ್ಲಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನಿಗದಿತ ಅವಧಿಯವರೆಗೆ ನಿರ್ದಿಷ್ಟ ಪ್ರದೇಶದಲ್ಲಿ ಸಾಲ ವಸೂಲಿ ಏಜೆಂಟರನ್ನು ನೇಮಿಸದಂತೆ ಬ್ಯಾಂಕ್ಗಳಿಗೆ ಸೂಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.