ಗೋಮಾಂಸ ಮಾರಾಟ ಪ್ರಶ್ನಿಸಿದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಇಂದು ಮಲ್ಹೋತ್ರಾ

ಹೊಸದಿಲ್ಲಿ, ಜು.1: ಹೊರಗೆ ವಧಿಸಿದ ಜಾನುವಾರುಗಳ ಮಾಂಸವನ್ನು ಮಹಾರಾಷ್ಟ್ರದೊಳಗೆ ಮಾರಾಟ ಮಾಡುವುದು, ಮಾಂಸವನ್ನು ಉಪಯೋಗಿಸುವುದು ಅಪರಾಧವಲ್ಲ ಎಂಬ ಬಾಂಬೆ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹಿಂದೆ ಸರಿದಿದ್ದಾರೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಒಂದು ಪಕ್ಷದ ಪರ ನ್ಯಾಯವಾದಿಯಾಗಿ ತಾನು ಪ್ರತಿನಿಧಿಸಿರುವ ಕಾರಣ ಈಗ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ಅವರು ಹೇಳಿದ್ದಾರೆ. ಇದೀಗ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಇಡಲಾಗುವುದು. ಆ ಪೀಠವು ಈ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವಹಿಸಲಿದೆ ಎಂದು ನ್ಯಾ. ಎಎಂ ಸಪ್ರೆ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ರಾಜ್ಯದಲ್ಲಿ ಗೂಳಿ ಮತ್ತು ಎತ್ತುಗಳ ವಧೆಯನ್ನು ನಿಷೇಧಿಸಿರುವ ಮಹಾರಾಷ್ಟ್ರ ಸರಕಾರದ ಆದೇಶವನ್ನು ಬಾಂಬೆ ಹೈಕೋರ್ಟ್ 2017ರ ಮೇ ತಿಂಗಳಿನಲ್ಲಿ ಎತ್ತಿಹಿಡಿದಿತ್ತು. ಆದರೆ ರಾಜ್ಯದಿಂದ ಹೊರಗೆ ವಧಿಸಿದ ಜಾನುವಾರುಗಳ ಮಾಂಸವನ್ನು ಹೊಂದಿರುವುದು ಅಪರಾಧವಲ್ಲ ಎಂದು ಆದೇಶದಲ್ಲಿ ತಿಳಿಸಿತ್ತು. ಬಾಂಬೆ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಹಲವು ಅಪೀಲು ಹಾಗೂ ಎದುರು ಅಪೀಲುಗಳನ್ನು ದಾಖಲಿಸಲಾಗಿದೆ. ಗೋಮಾಂಸ ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ಸ್ವಾತೀಜ ಪರಾಂಜಪೆ ನೇತೃತ್ವದಲ್ಲಿ 30 ಮಂದಿ ಅರ್ಜಿ ಸಲ್ಲಿಸಿದ್ದು, ಇವರನ್ನು ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಪ್ರತಿನಿಧಿಸಿದ್ದಾರೆ.
ರಾಜ್ಯದಿಂದ ಹೊರಗೆ ವಧಿಸಿದ ಜಾನುವಾರುಗಳ ಮಾಂಸ ಹೊಂದಿರುವುದು ಅಪರಾಧವಲ್ಲ ಎಂಬ ಬಾಂಬೆ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರವೂ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಗೂಳಿ, ಎತ್ತು ಅಥವಾ ಹಸುವಿನ ಮಾಂಸವನ್ನು ಹೊಂದಿರುವುದಕ್ಕೆ ನಿಷೇಧ ವಿಧಿಸಿದ 1995ರ ಕಾಯ್ದೆಯನ್ನು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವ್ಯಾಖ್ಯಾನಿಸಲಾಗದು ಮತ್ತು ತೀರ್ಮಾನಿಸಲಾಗದು ಎಂದು ಮಹಾರಾಷ್ಟ್ರ ಸರಕಾರದ ಅರ್ಜಿಯಲ್ಲಿ ಹೇಳಲಾಗಿದೆ.