ತನ್ನ ಕ್ಷೇತ್ರದಲ್ಲಿ 'ಪ್ರತಿನಿಧಿ'ಯನ್ನು ನಿಯೋಜಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್
ಚಂಡಿಗಢ, ಜು. 1: ಗುರುದಾಸ್ಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರತಿನಿಧಿಯಾಗಿ ಲೇಖಕರೋರ್ವರನ್ನು ನಿಯೋಜಿಸಿದ ಕುರಿತಂತೆ ನಟ, ರಾಜಕಾರಣಿ ಸನ್ನಿ ಡಿಯೋಲ್ ಅವರನ್ನು ಪಂಜಾಬ್ನ ಆಡಳಿತರೂಢ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಗುರುದಾಸ್ಪುರದ ಸಂಸದರ ಲೆಟರ್ ಹೆಡ್ನಲ್ಲಿ ಹೇಳಿಕೆ ನೀಡಿರುವ ಡಿಯೋಲ್, ಸಭೆಗೆ ಪಾಲ್ಗೊಳ್ಳಲು ಹಾಗೂ ಕೆಲವು ಪ್ರಮುಖ ವಿಷಯಗಳನ್ನು ಅನುಸರಿಸಲು ಗುರುಪ್ರೀತ್ ಸಿಂಗ್ ಪಲ್ಹಾರಿ ಅವರನ್ನು ಪ್ರತಿನಿಧಿಯಾಗಿ ನಿಯೋಜಿಸಿದ್ದೇನೆ ಎಂದಿದ್ದಾರೆ. ಜೂನ್ 26ರಂದು ಈ ಪತ್ರ ನೀಡಲಾಗಿದೆ ಎಂದು ಲೇಖಕ ಪಲ್ಹಾರಿ ತಿಳಿಸಿದ್ದಾರೆ. ಈ ವಿವಾದವನ್ನು ಲಘುವಾಗಿ ಪರಿಗಣಿಸಿರುವ ಅವರು, ‘‘ಈ ನಿಯೋಜನೆ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ್ದು. ಗುರುದಾಸ್ಪುರದ ಜನರಿಗೆ 24 ಗಂಟೆಗಳ ಕಾಲ ಸೇವೆ ನೀಡಲು ನಿಯೋಜಿಸಿದಂತಿದೆೆ’’ ಎಂದು ಹೇಳಿದ್ದಾರೆ. ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಸಾರ್ವಜನಿಕ ವಿವಾದಗಳ ಬಗ್ಗೆ ಡಿಯೋಲ್ ನಿಗಾ ವಹಿಸುತ್ತಿದ್ದಾರೆ. ಅವರು ಪ್ರತಿ ತಿಂಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸಂಸತ್ ಅಧಿವೇಶನದ ಪೂರ್ಣಗೊಂಡ ಬಳಿಕ ಅವರು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದು ಮತದಾರರ ಜನಾದೇಶಕ್ಕೆ ಮಾಡಿದ ದ್ರೋಹ ಎಂದು ಕರೆದಿರುವ ಪಂಜಾಬ್ ಸಂಪುಟ ಸಚಿವ ಸುಖ್ಜೀಂದರ್ ಸಿಂಗ್ ರಾಂಧ್ವಾ, ಪ್ರತಿನಿಧಿಯನ್ನು ನಿಯೋಜಿಸುವ ಮೂಲಕ ಸನ್ನಿಡಿಯೋಲ್ ಗುರುದಾಸ್ಪುರದ ಮತದಾರರಿಗೆ ದ್ರೋಹ ಎಸಗಿದ್ದಾರೆ ಎಂದಿದ್ದಾರೆ.