ಜಿಎಸ್ಟಿ ಸಂಗ್ರಹ ಭಾರೀ ಕುಸಿತ: ಕಾರಣ ಏನು ಗೊತ್ತೇ ?

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ. ಗಿಂತ ಕಡಿಮೆಯಾಗಿದೆ. ವಿವಿಧ ವಲಯಗಳಲ್ಲಿ ಬೇಡಿಕೆ ಕುಸಿತ ಹಾಗೂ ತೆರಿಗೆ ವಂಚನೆ ಇದಕ್ಕೆ ಪ್ರಮುಖ ಕಾರಣ ಎಂದು ತೆರಿಗೆ ಸಲಹಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರೋಕ್ಷ ತೆರಿಗೆ ಸುಧಾರಣಾ ಕ್ರಮದ ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಅಂಕಿ ಅಂಶಗಳಿಂದ ಈ ಅಂಶ ಬಹಿರಂಗವಾಗಿದೆ. ಈ ಮಧ್ಯೆ ಸರ್ಕಾರ ನಕಲಿ ಇನ್ವೈಸ್ಗಳನ್ನು ಸೃಷ್ಟಿಸುವ ದಂಧೆಯಲ್ಲಿ ತೊಡಗಿರುವವರಿಗೆ ಕಟ್ಟೆಚ್ಚರ ನೀಡಿದೆ.
"ಪ್ರಾಮಾಣಿಕ ತೆರಿಗೆ ಪಾವತಿದಾರರ ಮೇಲೆ ಪರಿಣಾಮ ಬೀರುವ ನಕಲಿ ಇನ್ವೈಸ್ ದಂಧೆಗೆ ಕಡಿವಾಣ ಹಾಕಲೇಬೇಕಾಗಿದೆ. ಪ್ರಾಮಾಣಿಕ ವ್ಯಾಪಾರಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ನಕಲಿ ಇನ್ವೈಸ್ ಸೃಷ್ಟಿಸುವವರು ನೆಮ್ಮದಿಯಿಂದ ಇರುವಂತಿಲ್ಲ" ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಜಿಎಸ್ಟಿ ದಿನಾಚರಣೆ ಸಮಾರಂಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಜೂನ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕುಸಿದಿದ್ದರೂ, ಹಣಕಾಸು ವರ್ಷದ ಗುರಿಯನ್ನು ಸರ್ಕಾರ ತಲುಪಲಿದೆ. 2019-20ರಲ್ಲಿ ಸರ್ಕಾರ 6.1 ಲಕ್ಷ ಕೋಟಿ ರೂಪಾಯಿ ಕೇಂದ್ರೀಯ ಜಿಎಸ್ಟಿ ಸಂಗ್ರಹಿಸುವ ಗುರಿ ಹೊಂದಿದೆ. ಅಂತೆಯೇ ವಿಲಾಸಿ ಹಾಗೂ ಪಾಪದ ಸರಕುಗಳಾದ ಕಾರು, ತಂಬಾಕು, ಪಾನೀಯ ಹಾಗೂ ಕಲ್ಲಿದ್ದಲಿನ ಮೇಲೆ ವಿಧಿಸುವ ಪರಿಹಾರಾತ್ಮಕ ಸುಂಕದಿಂದ 1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇದೆ. ಸುಮಾರು 50 ಸಾವಿರ ಕೋಟಿ ಜಿಎಸ್ಟಿ ಬಾಕಿ ಇರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ಕೇಂದ್ರೀಯ ಜಿಎಸ್ಟಿ 18,366 ಕೋಟಿ ಸಂಗ್ರಹವಾಗಿದ್ದು, ರಾಜ್ಯ ಜಿಎಸ್ಟಿ 25,343 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ.