'ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು' ರಾಜ್ಯ ಸರಕಾರಕ್ಕೆ ನಿರ್ಣಯ ಸಲ್ಲಿಕೆ: ಡಾ. ಸೆಲ್ವಮಣಿ

ಮಂಗಳೂರು, ಜು. 2: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಇತಿಹಾಸ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರಿಡುವ ಕುರಿತಾದ ನಿರ್ಣಯವನ್ನು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಶಾಸಕರಿಂದ ವಿಧಾನ ಮಂಡಲದಲ್ಲಿ ಚರ್ಚೆ ನಡೆದು, ಕೇಂದ್ರಕ್ಕೆ ಸಲ್ಲಿಕೆಯಾಗಬೇಕಿದೆ ಎಂದು ಸಿಇಒ ಡಾ. ಸೆಲ್ವಮಣಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಜಿಪಂ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಸದಸ್ಯ ಧರಣೇಂದ್ರ ಕುಮಾರ್ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಇತಿಹಾಸ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರು ಇಡುವಂತೆ ನಿರ್ಣಯಿಸಿ ಕಳುಹಿಸಬೇಕೆಂದು ಆಗ್ರಹಿಸಿದಾಗ ಡಾ. ಸೆಲ್ವಮಣಿ ಈ ಮಾಹಿತಿ ನೀಡಿದರು.
ಕಿಂಡಿ ಅಣೆಕಟ್ಟುಗಳ ಹಲಗೆ ಶಿಥಿಲಗೊಂಡು ನೀರು ಸೋರಿಕೆಯಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದ ಬಗ್ಗೆ ವಿನೋದ್ ಕುಮಾರ್ ಬೊಳ್ಳೂರು ಪ್ರಸ್ತಾಪ ಮಾಡಿದರು. ಈ ಬಗ್ಗೆ ಗಮನಹರಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಿದ ಸಿಇಒ, ಜಲಧಾರೆ ಯೋಜನೆಯಲ್ಲಿ ಅನುದಾನವಿದೆ. ಸದಸ್ಯರು ತಮ್ಮ ಕ್ಷೇತ್ರದ ಕಿಂಡಿ ಅಣೆಕಟ್ಟುಳ ಮಾಹಿತಿ ಕೊಡಿ ಎಂದು ಹೇಳಿದರು.
ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಅಕ್ಷರ ದಾಸೋಹದ 11 ಮೂಟೆ ಅಕ್ಕಿ ಚೀಲ ನಾಪತ್ತೆಯಾಗಿರುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಗ್ರಾಮೀಣ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಲ್ಯಾಬ್ ಟೆಕ್ನೀಶಿಯನ್ ಕೊರತೆ ಬಗ್ಗೆ ಎಂ.ಎಸ್. ಮುಹಮ್ಮದ್ ಗಮನ ಸೆಳೆದರು. ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಲು ಕಟ್ಟಡ, ಸಿಬ್ಬಂದಿ ಮತ್ತು ಉಪಕರಣಗಳು ಬೇಕೇ ಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜತೆ ಸಭೆ ಮಾಡಿದ್ದೆ. ಸಿಎಂ ಜತೆ ಕೂಡಾ ಚರ್ಚೆ ನಡೆದಿದೆ. ಆರೋಗ್ಯ ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದು, ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಸಿಇಒ ಹೇಳಿದರು.
ಎಸ್ಎಸ್ಎಲ್ಸಿಯಲ್ಲಿ ಏಳನೇ ಸ್ಥಾನ ಬಂದಿರುವ ಬಗ್ಗೆ ಶಾಹುಲ್ ಹಮೀದ್ ಗಮನ ಸೆಳೆದು, ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಹೇಳಿದರು. ಫಲಿತಾಂಶದಲ್ಲಿ ನಮಗೆ ಮೋಸವಾಗಿದೆ ಎಂದು ತುಂಗಪ್ಪ ಬಂಗೇರ ಆರೋಪಿಸಿದರು. ಇದಕ್ಕುತ್ತರಿಸಿದ ಡಿಡಿಪಿಐ, ನಾವು ಪ್ರತಿವರ್ಷ ಫಲಿತಾಮಶದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ. ರ್ಯಾಂಕಿಂಗ್ನಲ್ಲಿ ಬೇರೆ ಜಿಲ್ಲೆಗಳು ಮುಂದಿದ್ದರೂ, ನಮ್ಮ ಸಾಧನೆ ಕಡಿಮೆ ಇಲ್ಲ ಎಂದು.
ಮಂಗಳಾ ಕ್ರೀಡಾಂಗಣದಲ್ಲಿ ವಾರ್ಷಿಕ 14 ಲಕ್ಷ ರೂ. ಆದಾಯ ಬರುತ್ತಿದೆ. ಆದರೂ ಮತ್ತೆ ಬೇಡಿಕೆ ಇಡಲಾಗುತ್ತಿದೆ. ಸುಳ್ಯ ಕ್ರೀಡಾಂಗಣ ಕೆಲಸವೇ ಮುಗಿದಿಲ್ಲ ಎಂದು ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಆಶಾ ತಿಮ್ಮಪ್ಪ ಗೌಡ, ಜನಾರ್ದನ ಪೂಜಾರಿ, ಮಮತಾ ಗಟ್ಟಿ, ಸುಜಾತಾ ಕೆ.ಪಿ. ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು. ಕ್ರೀಡಾ ಅಧಿಕಾರಿ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು. ಮುಂದಿ 17 ದಿನಗಳಲ್ಲಿ ಐದು ತಾಲೂಕುಗಳ ಕ್ರೀಡಾ ಸಮಿತಿಗಳ ಸಭೆ ಕರೆದು, ಇಷ್ಟರ ವರೆಗೆ ಬಂದ ಹಣ ಮತ್ತು ಖರ್ಚಿನ ಮಾಹಿತಿ ಕೊಡಿ. ಈ ಬಗ್ಗೆ ಆಡಿಟ್ ಮಾಡಿ ಸದಸ್ಯರಿಗೆ ಕೊಡುತ್ತೇವೆ ಅಧಿಕಾರಿಗೆ ಸಿಇಒ ನಿರ್ದೇಶನ ನೀಡಿದರು.
ಚರ್ಚೆಗೆ ಕಾರಣವಾದ ಜಿ.ಪಂ. ಅಧ್ಯಕ್ಷರ ಮೇಲಿನ ಆರೋಪ !
ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ಮಹಿಳಾ ವೈದ್ಯರನ್ನು ಜಿಲ್ಲಾ ಪಂ. ಅಧ್ಯಕ್ಷೆ ಅವಮಾನಿಸಿದ್ದಾರೆಂಬ ಎಂಬ ವೀಡಿಯೊ ವೈರಲ್ ಮತ್ತು ವೈದ್ಯರ ಆರೋಪಗಳು ಮಂಗಳವಾರ ನಡೆದ ಜಿಪಂ ಮುಂದುವರಿದ ಸಾಮಾನ್ಯ ಸಭೆಯಲ್ಲಿಯೂ ಪ್ರತಿಧ್ವನಿಸಿತು.
ಸದಸ್ಯ ಎಂ.ಎಸ್. ಮುಹಮ್ಮದ್ ವಿಷಯ ಪ್ರಸ್ತಾಪಿಸಿ, ನಮ್ಮ ಅಧ್ಯಕ್ಷರು ವೈದ್ಯರನ್ನು ಬೈದು, ಅವಮಾನಿಸಿದ್ದಾರೆ ಎಂಬ ಆರೋಪ ವೈದ್ಯರಿಂದ ಬಂದಿದೆ. ಇದು ಇಡೀ ಜಿಪಂನ ಗೌರವದ ಪ್ರಶ್ನೆ. ಆದ್ದರಿಂದ ಇದಕ್ಕೆ ಅಧ್ಯಕ್ಷರು ಸ್ಪಷ್ಟನೆ ಕೊಡಬೇಕು ಎಂದರು.
‘ನಾನು ಆಸ್ಪತ್ರೆಗೆ ಹೋದದ್ದು ಹೌದು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಬಗ್ಗೆ ವಿಚಾರಿಸಿದೆ. ನನಗೆ ಯಾವುದೇ ಉತ್ತರ ಸಿಕ್ಕಿಲ್ಲ. ಮುಕ್ಕಾಲು ಗಂಟೆ ಕಾದಿದ್ದೇನೆ. ಪದೇ ಪದೇ ಕೇಳಿದರೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಸೌಜನ್ಯದಿಂದ ವರ್ತಿಸಿಲ್ಲ. ಆಗ, ವೈದ್ಯರ ಕ್ಯಾಬಿನ್ಗೆ ಹೋಗಿ ಖಡಕ್ ಮಾತನಾಡಿದ್ದೇನೆ. ಅದನ್ನು ಯಾರು ವೀಡಿಯೊ ಮಾಡಿ ವೈರಲ್ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಅಧ್ಯಕ್ಷೆ ಮೀನಾಕ್ಷಿ ಹೇಳಿದರು.
‘ನಾವು ಕೂಡಾ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯುತ್ತಿದ್ದ ಎಂಟನೇ ತರಗತಿಯ ಬಾಲಕಿ ಬಳಿಯೇ ವಿಚಾರಣೆ ಮಾಡಿ ಬಂದಿದ್ದೇವೆ. ಇದನ್ನು ಇಲಾಖೆ ಗಮನಕ್ಕೆ ತಂದಿದ್ದೇವೆ. ದಲಿತ ಸಂಘಟನೆಗಳ ಮುಖಂಡರು ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಒದಗಿಸಲು ಮನವಿ ಮಾಡಿದ್ದರು. ನಂತರ ಮೂವರು ಪೊಲೀಸರ ಅಮಾನತು ನಡೆದಿದೆ. ನಮಗೆ ನಮ್ಮ ಅಧ್ಯಕ್ಷರ ಮೇಲಿನ ಕೇಸು ಹಾಗೂ ‘ವರ್ತನೆ’ ಬಗ್ಗೆ ವೈದ್ಯರ ಆಕ್ರೋಶ ಬಗ್ಗೆ ತೀರ್ಮಾನಕ್ಕೆ ಬರಬೇಕು ಎಂದು ಮುಹಮ್ಮದ್ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅಥವಾ ಸದಸ್ಯರಾದ ನಾವು ಸೌಜನ್ಯದಿಂದ ವರ್ತಿಸಬೇಕು. ವೈದ್ಯರಿಗೂ ಆತ್ಮ ಗೌರವ ಎಂಬುದಿದೆ. ನಾವು ಸಹನೆ ಮೀರಿ ವರ್ತಿಸಿದರೆ ಇಡೀ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬರುತ್ತದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಘಟನೆ ಬಗ್ಗೆ ಕೂಲಂಕಷ ಚರ್ಚೆ ಆಗಬೇಕು ಎಂದು ಹರೀಶ್ ಕಂಜಿಪಿಲಿ ಹೇಳಿದರೆ, ವೈದ್ಯರ ಆರೋಪಗಳನ್ನು ಶಾಹುಲ್ ಹಮೀದ್ ಓದಿ ಹೇಳಿದರು. ಈ ಬಗ್ಗೆ ಅಧ್ಯಕ್ಷರ ಕ್ಯಾಬಿನ್ನಲ್ಲಿ ಕುಳಿತು ಚರ್ಚಿಸುವ ಎಂದು ಸುಚರಿತ ಶೆಟ್ಟಿಯವರು ಸಲಹೆ ನೀಡುವ ಮೂಲಕ ಚರ್ಚೆ ಕೊನೆಗೊಂಡಿತು.













