ಸಾರ್ವಜನಿಕ ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸಿ: ಯು.ಟಿ.ಖಾದರ್

ಕಲಬುರ್ಗಿ, ಜು.2: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಗೆ ಮನವಿ ಮಾಡಿದರು.
ನಗರದ ಸ್ವಸ್ತಿಕ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಭೇಟಿ ನೀಡಿದ ಅವರು, ಜನತೆ ಉದ್ಯಾನಕ್ಕೆ ವಾಯು ವಿಹಾರಕ್ಕೆ ಬರುವಾಗ ಅವರಿಗೆ ಉತ್ತಮ ಪುಸ್ತಕಗಳು ದೊರೆತರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಜೊತೆ ಜೊತೆಗೆ ವೃದ್ಧಿಸಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸುವುದರ ಸಂಬಂಧ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೂ ಮುನ್ನ ಸಚಿವ ಯು.ಟಿ.ಖಾದರ್ ಜಯದೇವ ಆಸ್ಪತ್ರೆಯ ಹತ್ತಿರ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿದರು.
ಈ ವೇಳೆ ಇಂದಿರಾ ಕ್ಯಾಂಟಿನ್ನಲ್ಲಿ ಮಾಡಿದ ಅನ್ನ ಸಾಂಬಾರ್ ಸವಿದು, ಸಾಂಬಾರ್ ಚೆನ್ನಾಗಿದೆ. ಇದೇ ರುಚಿಯನ್ನು ಮುಂದುವರೆಸಿ ಹಾಗೂ ಸ್ವಚ್ಛತೆಯನ್ನು ಕಾಪಾಡಿ ಎಂದು ಅವರು ಸೂಚಿಸಿದರು.







