ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಧರಣಿ
ಬೆಂಗಳೂರು, ಜು.3: ತುಂಗಭದ್ರಾ ನೀರಾವರಿ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕು, ಹೊರಗುತ್ತಿಗೆ ಪದ್ಧತಿ ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನಗರದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಜನ ಕಾರ್ಮಿಕರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ಶೀಘ್ರ ನಮಗೆ ಬಾಕಿಯಿರುವ ವೇತನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ತುಂಗಭದ್ರಾ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ವೇತನ ಪಾವತಿಸದೇ ಅನ್ಯಾಯ ಮಾಡಲಾಗಿದೆ. ಅದರ ಜತೆಗೆ ಭವಿಷ್ಯನಿಧಿಯನ್ನು ನೀಡಿಲ್ಲ, ಹೀಗಾಗಿ, 15 ವರ್ಷಗಳ ಭವಿಷ್ಯನಿಧಿ ಪಾವತಿಸಬೇಕು ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತುಂಗಭದ್ರಾ ನೀರಾವರಿ ವಲಯದ ಎಡದಂಡೆ ಕಾಲುವೆಯ ಯರಮರಸ್ ವೃತ್ತ ಹಾಗೂ ಯರಮರಸ್ ಭಾಗಗಳಲ್ಲಿ ಕಳೆದ 25 ವರ್ಷಗಳಿಂದ ಸುಮಾರು 748 ಮಂದಿ ಕಾರ್ಮಿಕರು ದುಡಿಯುತ್ತಿದ್ದು 2018ರಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ತೆಗೆದುಕೊಳ್ಳಲು ಸರಕಾರ ಕ್ರಮಕೈಗೊಂಡಿತ್ತು. ಹೊರಗುತ್ತಿಗೆ ಜಾರಿಯಾದರೆ ತುಂಗಭದ್ರಾ ಕಾರ್ಮಿಕರ 25 ವರ್ಷಗಳ ಸೇವೆ ಮಣ್ಣು ಪಾಲಾಗಲಿದೆ ಎಂದು ಖಂಡಿಸಿ ಸುಮಾರು 70 ದಿನಗಳ ಕಾಲ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2018ರ ಸೆಪ್ಟೆಂಬರ್ 17 ರಂದು ಪ್ರತಿಭಟನಾ ಸ್ಥಳಕ್ಕೆ ಬಂದ ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ನೀರಾವರಿ ನಿಗಮದ ಅಧಿಕಾರಿಗಳು ಆಗಮಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಲಿಲ್ಲ ಎಂದು ಹೇಳಿದರು.
ಕಳೆದ ವರ್ಷ ಎಪ್ರಿಲ್ನಿಂದ ಇಲ್ಲಿಯವರೆಗೂ ಸಂಬಳ ನೀಡಿಲ್ಲ, ಹೊರಗುತ್ತಿಗೆ ರದ್ದಾಗಿಲ್ಲ, 15 ವರ್ಷದ ಭವಿಷ್ಯನಿಧಿಗೆ ಹಣ ಜಮೆ ಮಾಡಿಲ್ಲ ಎಂದ ಪ್ರತಿಭಟನಾಕಾರರು, ಕಳೆದ 13 ತಿಂಗಳುಗಳಲ್ಲಿ ಕಾರ್ಮಿಕರ ಖಾತೆಗೆ ಕೇವಲ 40 ಸಾವಿರ ರೂ.ಗಳಷ್ಟೇ ಹಾಕಲಾಗಿದ್ದು. ಇದು ಯಾವ ಹಣ ಎಂಬ ಮಾಹಿತಿಯೂ ನಮಗೆ ದೊರೆತಿಲ್ಲ. ಹೀಗಾಗಿ, ಕೂಡಲೇ ರಾಜ್ಯ ಸರಕಾರ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.







