ಸಿಡಬ್ಯ್ಲೂಜಿ ಹಗರಣ: 94 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ, ಜು.4: 9 ವರ್ಷದ ಹಿಂದೆ ಕಾಮನ್ವೆಲ್ತ್ ಗೇಮ್ಸ್ (ಸಿಡಬ್ಲೂಜಿ) ಸಂದರ್ಭ ನಡೆದಿದ್ದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂಸ್ಥೆಯೊಂದರ 94 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ದಿಲ್ಲಿಯಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭ ಹೊಸದಿಲ್ಲಿಯ ಶಿವಾಜಿ ಕ್ರೀಡಾಂಗಣ ಮತ್ತು ತಲ್ಕತೋರ ಕ್ರೀಡಾಂಗಣಗಳನ್ನು ತಲಾ 50 ಲಕ್ಷ ವೆಚ್ಚದಲ್ಲಿ ನವೀಕರಿಸುವ ಗುತ್ತಿಗೆಯನ್ನು ಪಡೆದುಕೊಳ್ಳಲು ರಾಜಾ ಎಡೇರಿ ಕನ್ಸಲ್ಟೆಂಟ್ಸ್ ಎಂಬ ಸಂಸ್ಥೆ ಸುಳ್ಳು ದಾಖಲೆ ಪತ್ರವನ್ನು ಒದಗಿಸಿದೆ. ಅಲ್ಲದೆ ಅಗತ್ಯದ ಅನುಭವ ಇರದಿದ್ದರೂ ಎರಡೂ ಕ್ರೀಡಾಂಗಣದಲ್ಲಿ ಐದು ಮಹಡಿ ಕಟ್ಟಡ ನಿರ್ಮಿಸುವ 5.25 ಕೋಟಿ ರೂ.ಮೊತ್ತದ ಕಾಮಗಾರಿಯನ್ನು ಈ ಸಂಸ್ಥೆಗೆ ವಹಿಸಲಾಗಿದೆ ಎಂದು ಸಿಬಿಐ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ನಿರ್ಬಂಧ ಕಾಯ್ದೆಯಡಿ ಈ ಸಂಸ್ಥೆಗೆ ಸೇರಿದ 94 ಲಕ್ಷ ರೂ. ವೌಲ್ಯದ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.