ಇಂಜಿನಿಯರ್ ಮೇಲೆ ಕೆಸರು ಸುರಿದ ಕಾಂಗ್ರೆಸ್ ಶಾಸಕ ರಾಣೆ ಬಂಧನ

ಮುಂಬೈ, ಜು.4: ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತವರ ಸಂಗಡಿಗರು ಮುಂಬೈ ಬಳಿಯ ಹೆದ್ದಾರಿಯಲ್ಲಿ ಸರಕಾರಿ ಅಧಿಕಾರಿಯ ಮೇಲೆ ಬಕೆಟ್ನಲ್ಲಿ ಕೆಸರು ತುಂಬಿ ಸುರಿದ ಘಟನೆ ನಡೆದಿದ್ದು, ಘಟನೆಯ ವೀಡಿಯೊ ದೃಶ್ಯಾವಳಿ ವೈರಲ್ ಆದ ಬಳಿಕ ಶಾಸಕ ರಾಣೆ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಯ ಪುತ್ರ ನಿತೇಶ್ ರಾಣೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಕಾಮಗಾರಿಯ ವೀಕ್ಷಣೆಗೆ ದಿಢೀರ್ ಭೇಟಿ ನೀಡಿದ್ದರು. ಆಗ ರಸ್ತೆಯ ದುಸ್ಥಿತಿಯನ್ನು ಕಂಡು ತಾಳ್ಮೆ ಕಳೆದುಕೊಂಡ ಶಾಸಕ ರಾಣೆ, ಇಂಜಿನಿಯರ್ ಪ್ರಕಾಶ್ ಶೆಡೇಕರ್ ಎಂಬವರನ್ನು ತರಾಟೆಗೆತ್ತಿಕೊಂಡಿದ್ದಾರೆ. ನಿಮ್ಮಿಂದಾಗಿ ದಿನನಿತ್ಯ ಜನತೆ ಕಷ್ಟಪಡುತ್ತಿದ್ದಾರೆ. ಈಗ ನೀನೂ ಆ ಕಷ್ಟವನ್ನು ಅನುಭವಿಸು ಎಂದು ಇಂಜಿನಿಯರ್ಗೆ ಹೇಳಿದ ಶಾಸಕ ರಾಣೆ ಹಾಗೂ ಬೆಂಬಲಿಗರು ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಕೆಟ್ನಲ್ಲಿ ಕೆಸರು ತುಂಬಿ ಅವರ ಮೇಲೆ ಸುರಿದಿದ್ದಾರೆ. ಅಲ್ಲದೆ ಇಂಜಿನಿಯರ್ನನ್ನು ಅಲ್ಲೇ ರಸ್ತೆ ಬದಿಯ ಸೇತುವೆಯ ಕಂಬಕ್ಕೆ ಕಟ್ಟಿ ಹಾಕಲೂ ಯತ್ನಿಸಿದ್ದಾರೆ.
ಈಗ ನಿನಗೆ ತಕ್ಕ ಶಾಸ್ತಿಯಾಗಿದೆ ಎಂದು ಅಧಿಕಾರಿಯನ್ನುದ್ದೇಶಿಸಿ ಹೇಳಿದ ರಾಣೆ, ಈ ಪ್ರದೇಶವನ್ನು ಕೆಸರಿನಲ್ಲಿ ಮುಳುಗಿಸಲು ನಿನಗೆ ಯಾರು ಅಧಿಕಾರ ನೀಡಿದವರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೈಯಲ್ಲಿ ದೊಣ್ಣೆಯೊಂದನ್ನು ಹಿಡಿದುಕೊಂಡು ‘ಇನ್ನು ಮುಂದೆ ಇಲ್ಲಿ ನಡೆಯುವ ರಸ್ತೆ ದುರಸ್ತಿ ಕಾಮಗಾರಿಯ ಉಸ್ತುವಾರಿ ನಾನು ನೋಡಿಕೊಳ್ಳುತ್ತೇನೆ. ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ದಿನಾ ಬೆಳಿಗ್ಗೆ 7 ಗಂಟೆಗೆ ಇಲ್ಲಿಗೆ ಬರುತ್ತೇನೆ. ಅಧಿಕಾರಿಗಳ ಉದ್ಧಟತನಕ್ಕೆ ನಮ್ಮಲ್ಲಿ ಮದ್ದಿದೆ’ ಎಂದು ಹೇಳುವುದೂ ವೀಡಿಯೊದಲ್ಲಿ ದಾಖಲಾಗಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಠಾಣೆಗೆ ತೆರಳಿದ ರಾಣೆ ಅಲ್ಲಿ ಶರಣಾದರು. ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಿತೇಶ್ ರಾಣೆ ಈ ಹಿಂದೆಯೂ, (2017ರಲ್ಲಿ) ಸಭೆಯೊಂದರಲ್ಲಿ ತಾಳ್ಮೆ ಕಳೆದುಕೊಂಡು ಹಿರಿಯ ಸರಕಾರಿ ಅಧಿಕಾರಿಯೊಬ್ಬರ ಮೇಲೆ ಮೀನನ್ನು ಎಸೆದಿದ್ದರು.