ರಾಷ್ಟ್ರಪತಿಗೆ ರಕ್ತದಿಂದ ಪತ್ರ ಬರೆದ ಇಬ್ಬರು ಸಹೋದರಿಯರು: ಕಾರಣವೇನು ಗೊತ್ತಾ?

ಚಂಡೀಗಢ, ಜು.6: ಪಂಜಾಬ್ ರಾಜ್ಯದ ಮೋಗಾ ನಗರದ ಇಬ್ಬರು ಯುವತಿಯರು ತಮ್ಮ ರಕ್ತದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಸುಳ್ಳು ವಂಚನೆ ಪ್ರಕರಣಗಳಿಂದ ಹೊರ ಬರಲು ತಮಗೆ ಸಹಾಯ ಮಾಡುವಂತೆ ಕೋರಿದ್ದಾರೆ.
ತಮ್ಮ ವಿರುದ್ಧದ ಸುಳ್ಳು ಪ್ರಕರಣಗಳಿಂದ ಸದಾ ಭಯದಿಂದಲೇ ಬದುಕುವಂತಾಗಿದೆ, ನ್ಯಾಯ ದೊರೆಯದು ಎಂದಾದರೆ ತಮ್ಮ ಇಡೀ ಕುಟುಂಬಕ್ಕೆ ದಯಾ ಮರಣ ದಯಪಾಲಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.
``ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಅನ್ವಯು ಕಬೂತರ್ಬಾಝಿ (ವೀಸಾ ವಂಚನೆ) ಪ್ರಕರಣವನ್ನು ನಮ್ಮ ವಿರುದ್ಧ ದಾಖಲಿಸಲಾಗಿದೆ. ಇದು ಸುಳ್ಳು ಆರೋಪವಾಗಿರುವುದರಿಂದ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರೂ ಅವರು ನಮ್ಮ ಮಾತುಗಳನ್ನು ಆಲಿಸುತ್ತಿಲ್ಲ'' ಎಂದು ಯುವತಿಯರು ಹೇಳಿದ್ದಾರೆ.
ಆದರೆ ಈ ಇಬ್ಬರು ಮೋಗಾ ಪೊಲೀಸರ ವಿರುದ್ಧ ಮಾಡಿರುವ ಆರೋಪಗಳನ್ನು ಅಲ್ಲಿನ ಪೊಲೀಸ್ ಅಧಿಕಾರಿ ಕುಲ್ಜಿಂದರ್ ಸಿಂಗ್ ನಿರಾಕರಿಸುತ್ತಾರೆ. ಯುವತಿಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
“ಅವರು ನನ್ನ ಬಳಿ ಬಂದು ಅವರು ಫೈನಾನ್ಸ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ಖಾತರಿಯಾಗಿ ಅವರಿಗೆ ಒಂದು ಚೆಕ್ ದೊರಕಿತ್ತು. ಆದರೆ ತಮ್ಮ ಪುತ್ರನನ್ನು ವಿದೇಶಕ್ಕೆ ಕಳುಹಿಸಲು ಹಣ ನೀಡಿದ್ದ ಕೆಲ ಜನರು ಇವರನ್ನು ಏಜಂಟರೆಂದು ತಿಳಿದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು ಅವರು ರಾಷ್ಟ್ರಪತಿಗೆ ಪತ್ರ ಕಳುಹಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಅವರ ಪ್ರಕರಣ ಆದಷ್ಟು ಬೇಗ ಪರಿಹರಿಸಲಾಗುವುದು, ದೂರುದಾರರು ತನಿಖೆಗೆ ಸಹಕರಿಸದೇ ಇರುವುದರಿಂದ ವಿಳಂಬವಾಗಿದೆ'' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.