ಇಡೀ ಬಜೆಟ್ ಭಾಷಣದಲ್ಲಿ ಒಮ್ಮೆ ಮಾತ್ರ ಜಿಡಿಪಿಯ ಉಲ್ಲೇಖ: ಶಶಿ ತರೂರ್ ಟೀಕೆ

ಹೊಸದಿಲ್ಲಿ,ಜು.6: ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ ನಲ್ಲಿ ಮಂಡಿಸಿರುವ ಕೇಂದ್ರ ಬಜೆಟನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ವಿವಿಧ ವಲಯಗಳಿಗೆ ನೀಡಲಾದ ಅನುದಾನಗಳನ್ನು ಬಜೆಟ್ನಲ್ಲಿ ಸೂಚಿಸಲಾಗಿಲ್ಲವೆಂದು ಅವರು ಹೇಳಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಇಡೀ ಬಜೆಟ್ ಭಾಷಣದಲ್ಲಿ ಒಟ್ಟು ಆಂತರಿಕ ಉತ್ಪನ್ನ ( ಜಿಡಿಪಿ) ಬಗ್ಗೆ ಒಂದು ಬಾರಿ ಮಾತ್ರ ಪ್ರಸ್ತಾಪಿಸಿದ್ದಾರೆಂದು ಅವರು ಕಟಕಿಯಾಡಿದ್ದಾರೆ.
‘‘ಇಡೀ ಬಜೆಚ್ ಭಾಷಣದಲ್ಲಿ ಜಿಡಿಪಿ ಪದವನ್ನು ಕೇವಲ ಒಂದು ಸಲ ಮಾತ್ರ ಬಳಸಲಾಗಿದೆ. ಜಿಡಿಪಿಯ ಬೆಳವಣಿಗೆಯಾಗುತ್ತಿಲ್ಲ. ಆದರೂ ಸರಕಾರವು ಆರ್ಥಿಕತೆಯು ಶೇ.7ರಷ್ಟು ಬೆಳವಣಿಗೆಯಾಗಿದೆಯೆಂದು ಇನ್ನೂ ಹೇಳಿಕೊಳ್ಳುತ್ತಿದೆ’’ ಎಂದು ತರೂರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಾಲಿ ಹಣಕಾಸು ವರ್ಷದಲ್ಲಿ ಭಾರತವು 3 ಟ್ಲಿಲಿಯನ್ ಡಾಲರ್ ಅರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದರು.
ಶ್ರೀಸಾಮಾನ್ಯನಿಗೆ ತಲಾವಾರು ಜಿಡಿಪಿಯು ಮುಖ್ಯವಾಗಿದೆಯೇ ಹೊರತು 5 ಟ್ರಿಲಿಯನ್ ಡಾಲರ್ ಅರ್ಥಿಕತೆಯಲ್ಲವೆಂದು ಶಶಿ ತರೂರ್ ಹೇಳಿದ್ದಾರೆ. ವಿಶ್ವಬ್ಯಾಂಕ್ ವರದಿಯೊಂದು ತಲಾ ಆದಾಯದಲ್ಲಿ ಭಾರತವು, ಶ್ರೀಲಂಕಾದಂತಹ ದೇಶಗಳಿಗಿಂತಲೂ ಹಿಂದಿರುವುದಾಗಿ ಬಹಿರಂಗಪಡಿಸಿರುವುದಾಗಿ ‘ದಿ ಹಿಂದೂ’ ಪತ್ರಿಕೆಯ ವರದಿಯು ಹೇಳಿದೆಯೆಂದು ತರೂರ್ ಬೆಟ್ಟು ಮಾಡಿ ತೋರಿಸಿದರು.
ಕೃಷಿ ಕ್ಷೇತ್ರದ ಅನುದಾನದಲ್ಲಿ ಹೆಚ್ಚಳವಾಗಿದ್ದರೂ, ಅದರ ಪ್ರಮುಖ ಪಾಲು ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ಅರ್ಥಿಕ ಬೆಂಬಲ ಒದಗಿಸುವ ಪ್ರಧಾನ್ ಮಂತ್ರಿ ಕಿಸ್ಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ-ಕಿಸಾನ್ ಯೋಜನೆಗಳ ಪಾಲಾಗಿವೆ ಎಂದರು. ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಗಿಂತ ವಿಮಾ ಕಂಪೆನಿಗಳಿಂದ ರೈತರು ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆಂದು ಅವರು ಹೇಳಿದರು.
ಬಜೆಟ್ನಲ್ಲಿ ಕೇರಳವನ್ನು ಅವಗಣಿಸಲಾಗಿದೆಯೆಂದು ತಿರುವನಂತಪುರದ ಸಂಸದರೂ ಆಗಿರುವ ತರೂರ್ ಹೇಳಿದರು.