ಅಮೂಲ್ಯ ಜೀವ ಉಳಿಸಲು ರಕ್ತದಾನ ಮಾಡಿ: ನಿರ್ದೇಶಕ ಓಂ.ಶ್ರೀ.ಸಾಯಿ ಪ್ರಕಾಶ್
ಬೆಂಗಳೂರು, ಜು.8: ಯುವ ಸಮುದಾಯವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಸಿನೆಮಾ ಹಿರಿಯ ನಿರ್ದೇಶಕ ಓಂ.ಶ್ರೀ.ಸಾಯಿ ಪ್ರಕಾಶ್ ನುಡಿದರು.
ಸೋಮವಾರ ನಗರದಲ್ಲಿಂದು ಹೊಸೂರು ರಸ್ತೆಯ ಕಿದ್ವಾಯಿ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ರಕ್ತನಿಧಿ ಕೇಂದ್ರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡಿದ ಬಳಿಕ ಅವರು ಮಾತನಾಡಿದರು.
ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ತಪ್ಪುಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದನ್ನು ತೊಲಗಿಸಬೇಕಿದೆ. ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನಕ್ಕೆ ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ನಟ ಗಣೇಶ್ ರಾವ್ ಮಾತನಾಡಿ, ರಕ್ತದಾನದಿಂದ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಜತೆಗೆ ಹೃದಯಾಘಾತದ ಸಂಭವ, ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಕರ್ಮಿ ಆಡುಗೋಡಿ ಶ್ರೀನಿವಾಸ್, ಹಿರಿಯ ಕಲಾವಿದರಾದ ನಟರಾದ ಡಿಂಗ್ರಿ ನಾಗರಾಜ್, ಮನೋಜ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.