ಕಾಂಗ್ರೆಸ್ ತಕ್ಷಣವೇ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಬೇಕು: ಕರಣ್ ಸಿಂಗ್ ಸಲಹೆ

ಹೊಸದಿಲ್ಲಿ, ಜು.9: ನೂತನ ಅಧ್ಯಕ್ಷರ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ ಹಾಗೂ ಮಾಜಿ ರಾಜ್ಯಪಾಲ ಕರಣ್ ಸಿಂಗ್ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿಗೆ ಅಧ್ಯಕ್ಷರಾಗಿ ಮುಂದುವರಿಯುವಂತೆ ವಿನಂತಿಸುವ ಮೂಲಕ ಈಗಾಗಲೇ ಕಾಂಗ್ರೆಸ್ ಒಂದು ತಿಂಗಳು ವ್ಯರ್ಥ ಮಾಡಿದೆ. ಇನ್ನಾದರೂ ತಕ್ಷಣವೇ ಹಂಗಾಮಿ ಅಧ್ಯಕ್ಷ ಹಾಗೂ ನಾಲ್ವರು ಕಾರ್ಯಾಧ್ಯಕ್ಷರು ಅಥವಾ ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು 88ರ ಹರೆಯದ ಕರಣ್ ಸಿಂಗ್ ಸಲಹೆ ನೀಡಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಈ ಕುರಿತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿ ತಲಾ ಒಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸಿಂಗ್ ಸಲಹೆ ನೀಡಿದರು.
"ರಾಹುಲ್ ಗಾಂಧಿ ಅವರ ದಿಟ್ಟ ನಿರ್ಧಾರಕ್ಕೆ ಗೌರವ ನೀಡುವ ಬದಲು, ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ವಿನಂತಿಸುವ ಮೂಲಕ ಒಂದು ತಿಂಗಳು ವ್ಯರ್ಥ ಮಾಡಲಾಗಿದೆ. ಅವರ ನಿರ್ಧಾರವನ್ನು ನಾವೆಲ್ಲರೂ ಗೌರವಿಸಬೇಕೇ ಹೊರತು ಒತ್ತಡ ಹೇರುವುದು ಸರಿಯಲ್ಲ. ಕಾಂಗ್ರೆಸ್ನ ಈಗಿನ ಪರಿಸ್ಥಿತಿ ಅಸ್ವೀಕಾರಾರ್ಹವಾಗಿದ್ದು, ಪಕ್ಷದ ತಕ್ಷಣವೇ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ'' ಎಂದು ಕರಣ್ ಹೇಳಿದ್ದಾರೆ.