ಶರಣಾಗತಿಗೆ ಸಮಯಾವಕಾಶ ಕೋರಿ ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ, ಜು.9: ಸುಮಾರು 18 ವರ್ಷಗಳ ಹಿಂದೆ ತನ್ನ ಉದ್ಯೋಗಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಅರೋಪದಲ್ಲಿ ತನ್ನ ಶರಣಾಗತಿಯ ಸಮಯವನ್ನು ವಿಸ್ತರಿಸಬೇಕೆಂದು ಕೋರಿ ಶರವಣ ಭವನ್ ಹೋಟೆಲ್ ಮಾಲಕ ಪಿ. ರಾಜಗೋಪಾಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ 2019ರ ಮಾರ್ಚ್ನಲ್ಲಿ ನೀಡಿದ್ದ ತೀರ್ಪಿನ ಪ್ರಕಾರ ರಾಜಗೋಪಾಲ್ ಜು.7 ರಂದು ಶರಣಾಗಬೇಕಾಗಿತ್ತು. ತನ್ನ ಹೊಟೇಲ್ ಉದ್ಯೋಗಿಯ ಕೊಲೆ ಪ್ರಕರಣದಲ್ಲಿ ರಾಜಗೋಪಾಲ್ ದೋಷಿ ಎಂದು ಹೇಳಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.
ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಇನ್ನಷ್ಟು ಸಮಯ ಉಳಿದುಕೊಳ್ಳಲು ಶರಣಾಗತಿಯ ಸಮಯವನ್ನು ಇನ್ನಷ್ಟು ವಿಸ್ತರಿಸಬೇಕೆಂದು ರಾಜಗೋಪಾಲ್ ಪರ ವಕೀಲ ಕಪಿಲ್ ಸಿಬಾಲ್ ನ್ಯಾಯಾಲಯವನ್ನು ಕೋರಿದ್ದರು.
ಶರಣಾಗತಿಯ ಅವಧಿ ಮುಂದೂಡಿಕೆ ಸಾಧ್ಯವಿಲ್ಲ ಎಂದು ಜಸ್ಟಿಸ್ ಮೋಹನ್ ಎಂ.ಶಾಂತನಗೌಡರ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ.
ರಾಜಗೋಪಾಲ್ ತನ್ನ ಹೊಟೇಲ್ ಉದ್ಯೋಗಿ ಸಂತಕುಮಾರ್ ಎಂಬಾತನನ್ನು ಹತ್ಯೆ ಮಾಡಿಸಿ ಟೈಗರ್ ಶೋಲಾ ಅರಣ್ಯಪ್ರದೇಶದಲ್ಲಿ ಹೂತು ಹಾಕಿದ್ದರು. ರಾಜಗೋಪಾಲ್ ಅವರು ಸಂತಕುಮಾರ್ ಪತ್ನಿ ಜೀವಜ್ಯೋತಿಯನ್ನು ತನ್ನ ಮೂರನೇ ಪತ್ನಿಯಾಗಿ ಸ್ವೀಕರಿಸಲು ಬಯಸಿದ್ದರು.