ನವ ಮಂಗಳೂರು ಬಂದರಿನಲ್ಲಿ ಕಳ್ಳ ಸಾಗಾಟ ಪತ್ತೆಗೆ ಮೊಬೈಲ್ ಸ್ಕಾನರ್: ಎ.ಕೆ. ಜ್ಯೋತಿಷಿ
ಮಂಗಳೂರು, ಜು.9: ನವ ಮಂಗಳೂರು ಬಂದರಿನ ಮೂಲಕ ನಡೆಯುವ ವಹಿವಾಟಿನಲ್ಲಿ ಕಳ್ಳಸಾಗಣೆ ಪತ್ತೆಗೆ 30 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೊಬೈಲ್ ಸ್ಕಾನರ್ ಅಳವಡಿಸಲಾಗುವುದು ಎಂದು ಕಸ್ಟಮ್ಸ್ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ತಿಳಿಸಿದ್ದಾರೆ.
ನಗರದ ಹಳೆ ಬಂದರು ಪ್ರದೇಶದ ಹಳೆಯ ಕಸ್ಟಮ್ಸ್ ಕಚೇರಿಯ ನವೀಕೃತ ಕಟ್ಟಡವನ್ನು ಇಂದು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ಸರಕು ಪರಿಶೀಲನಾ ಕೇಂದ್ರದಲ್ಲಿ ಮೊಬೈಲ್ ಸ್ಕಾನರ್ ಅಳವಡಿಸಲಾಗುವುದು. ಈಗ ರಿಸ್ಕ್ ಮ್ಯಾನೇಜ್ಮೆಂಟ್ ಸಿಸ್ಟಂ ಮೂಲಕ ಶಂಕಿತ ಸರಕುಗಳನ್ನು ಗುರುತಿಸಿ, ಬಿಚ್ಚಿ ಶೋಧಿಸಲಾಗುತ್ತಿದೆ. ಮೊಬೈಲ್ ಸ್ಕಾನರ್ ಅಳವಡಿಕೆ ಬಳಿಕ ಯಂತ್ರವೇ ಶಂಕಿತ ಸರಕುಗಳನ್ನು ಪತ್ತೆಮಾಡಿ, ಮಾಹಿತಿ ನೀಡಲಿದೆ. ಆ ಬಳಿಕ ಹೆಚ್ಚಿನ ಶೋಧ ನಡೆಸಲಾಗುವುದು. ಇದರಿಂದ ಮಾನವ ಹಸ್ತಕ್ಷೇಪ ಮತ್ತು ಶ್ರಮದ ಬಳಕೆ ಕಡಿಮೆಯಾಗಲಿದೆ ಎಂದವರು ಹೇಳಿದರು.
ಹೊಸ ಸ್ಕಾನರ್ ಖರೀದಿ ಮುಗಿದಿದೆ. ಎರಡು ತಿಂಗಳೊಳಗೆ ಅದನ್ನು ಅಳವಡಿಸುವ ಕಾರ್ಯವಾಗಲಿದೆ. ಯಂತ್ರದ ಪೂರೈಕೆ, ಅಳವಡಿಕೆ, ಸಿಬ್ಬಂದಿಗೆ ತರಬೇತಿ ಮತ್ತು 10 ವರ್ಷಗಳ ನಿರ್ವಹಣೆಗಾಗಿ 30 ಕೋಟಿ ರೂ ವ್ಯಯಿಸಲಾಗುತ್ತಿದೆ ಎಂದರು.
ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಬಳಿ ಕಸ್ಟಮ್ಸ್ ಹೌಸ್ ನಿರ್ಮಾಣವಾಗಲಿದೆ. ಈಗಾಗಲೇ ರಾಜ್ಯ ಸರಕಾರದಿಂದ ಜಮೀನು ಮಂಜೂರಾಗಿದ್ದು, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಜ್ಯೋತಿಷಿ ಹೇಳಿದರು.







