‘ರಾಷ್ಟ್ರ ನಿರ್ಮಾಣದಲ್ಲಿ ಆರೆಸ್ಸೆಸ್ ಪಾತ್ರ’: ಮಹಾರಾಷ್ಟ್ರ ವಿವಿಯ ಪಠ್ಯದಲ್ಲಿ ಸೇರ್ಪಡೆ !

ನಾಗ್ಪುರ, ಜು.9: ‘ಸಂಘ ಪರಿವಾರದ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರ’ದ ಕುರಿತ ಪಾಠ ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿಸಲಾಗಿದೆ. ನಾಗ್ಪುರದಲ್ಲೇ ಸಂಘ ಪರಿವಾರದ ಮುಖ್ಯ ಕಚೇರಿಯೂ ಇದೆ.
ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾನಿಲಯವು ಎರಡನೇ ವರ್ಷದ ಬಿಎ (ಇತಿಹಾಸ)ದ ಪಠ್ಯದಲ್ಲಿ ಸಂಘ ಪರಿವಾರದ ಇತಿಹಾಸವನ್ನು ಸೇರಿಸಿದೆ.
ಪಠ್ಯದ ಮೂರನೇ ವಿಭಾಗದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಂಘ ಪರಿವಾರದ ಪಾತ್ರದ ಬಗ್ಗೆ ಸವಿವರವಾಗಿ ತಿಳಿಸಲಾಗಿದ್ದರೆ ಮೊದಲ ವಿಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾಪನೆ ಮತ್ತು ಜವಾಹರ್ ಲಾಲ್ ನೆಹರೂ ಅವರ ಉಗಮ ಹಾಗೂ ಎರಡನೇ ವಿಭಾಗದಲ್ಲಿ ನಾಗರಿಕ ಅಸಹಕಾರ ಚಳುವಳಿಯಂತಹ ಘಟನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಇತಿಹಾಸದ ನೂತನ ಪ್ರವೃತ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 2003-04ರಲ್ಲಿ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸಂಘ ಪರಿವಾರದ ಪರಿಚಯ ಎಂಬ ಪಾಠವನ್ನು ಸೇರಿಸಲಾಗಿತ್ತು.
ಈ ಕುರಿತು ಮಾತನಾಡಿದ ವಿಶ್ವವಿದ್ಯಾನಿಲಯ ಅಧ್ಯಯನ ಮಂಡಳಿ ಸದಸ್ಯ ಸತೀಶ್ ಚಫ್ಲೆ, ಇತಿಹಾಸವನ್ನು ಪುನಃ ಬರೆಯುವುದರಿಂದ ಸಮಾಜದ ಮುಂದೆ ಹೊಸ ವಾಸ್ತವಗಳು ತೆರೆದುಕೊಳ್ಳುತ್ತವೆ. ಲೋಕಮಾನ್ಯ ತಿಲಕರಂತಹ ರಾಷ್ಟ್ರವಾದಿ ಯೋಚನೆಯ ನಾಯಕರೂ ಭಾರತೀಯ ಇತಿಹಾಸದ ಭಾಗವಾಗಿದ್ದಾರೆ. ಹಾಗೆಯೇ, ಸಂಘ ಪರಿವಾರದ ಇತಿಹಾಸವೂ ರಾಷ್ಟ್ರವಾದದ ಭಾಗವಾಗಿದೆ ಎಂದು ತಿಳಿಸಿದ್ದಾರೆ.