ಮುಂಬೈನಲ್ಲಿ ಅತೃಪ್ತ ಶಾಸಕರ ಭೇಟಿಗೆ ಸಿಗದ ಅವಕಾಶ: ಸಚಿವ ಡಿಕೆಶಿ ಬರಿಗೈಲಿ ಬೆಂಗಳೂರಿಗೆ ವಾಪಸ್
ಹೊಟೇಲ್ ಪ್ರವೇಶಕ್ಕೆ ಪೊಲೀಸ್ ಅಡ್ಡಿ
![ಮುಂಬೈನಲ್ಲಿ ಅತೃಪ್ತ ಶಾಸಕರ ಭೇಟಿಗೆ ಸಿಗದ ಅವಕಾಶ: ಸಚಿವ ಡಿಕೆಶಿ ಬರಿಗೈಲಿ ಬೆಂಗಳೂರಿಗೆ ವಾಪಸ್ ಮುಂಬೈನಲ್ಲಿ ಅತೃಪ್ತ ಶಾಸಕರ ಭೇಟಿಗೆ ಸಿಗದ ಅವಕಾಶ: ಸಚಿವ ಡಿಕೆಶಿ ಬರಿಗೈಲಿ ಬೆಂಗಳೂರಿಗೆ ವಾಪಸ್](https://www.varthabharati.in/sites/default/files/images/articles/2019/07/10/199828-1562770006.jpg)
ಬೆಂಗಳೂರು, ಜು.10: ಅತೃಪ್ತ ಶಾಸಕರ ಮನವೊಲಿಕೆಗಾಗಿ ಮುಂಬೈಗೆ ತೆರಳಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದ ತಂಡವು, ಅತೃಪ್ತ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗದೇ ಬರಿಗೈಲಿ ವಾಪಸ್ ಆಗುವಂತೆ ಆಗಿದೆ.
ಶಿವಕುಮಾರ್ ಮುಂಬೈಗೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ರಕ್ಷಣೆ ಕೋರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ತಂಗಿದ್ದ ಹೊಟೇಲ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅತೃಪ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಅವರು ತಂಗಿದ್ದ ಹೊಟೇಲ್ನಲ್ಲಿಯೇ ಡಿ.ಕೆ.ಶಿವಕುಮಾರ್ ಕೊಠಡಿಯನ್ನು ಕಾಯ್ದಿರಿಸಿದ್ದರು. ಆದರೆ, ಇಂದು ಬೆಳಗ್ಗೆ ಹೊಟೇಲ್ ಪ್ರವೇಶಿಸಲು ಹೋದ ಅವರನ್ನು ಪೊಲೀಸರು ತಡೆದರು. ಅಲ್ಲದೇ, ಹೊಟೇಲ್ ಆಡಳಿತ ಮಂಡಳಿಯು ಇ-ಮೇಲ್ ಮೂಲಕ ಕಾಯ್ದಿರಿಸಿದ್ದ ಕೊಠಡಿಯನ್ನು ರದ್ದುಗೊಳಿಸಿರುವುದಾಗಿ ಸಂದೇಶ ಕಳುಹಿಸಿದರು.
ಡಿ.ಕೆ.ಶಿವಕುಮಾರ್ಗೆ ಹೊಟೇಲ್ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿದ ಕ್ರಮವನ್ನು ಖಂಡಿಸಿ, ಮುಂಬೈ ಮಹಾನಗರ ಕಾಂಗ್ರೆಸ್ ಸಮಿತಿಯ ಮುಖಂಡ ಮಿಲಿಂದ್ ದೇವೋರಾ ಸೇರಿದಂತೆ ಇನ್ನಿತರ ಮುಖಂಡರು ಹೊಟೇಲ್ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಬಂದು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ, ‘ಗೋ ಬ್ಯಾಕ್ ಶಿವಕುಮಾರ್’ ಎಂದು ಘೋಷಣೆಗಳನ್ನು ಕೂಗಿದರು.
ಮುಂಜಾನೆ ಏಳು ಗಂಟೆಯಿಂದಲೂ ಹೊಟೇಲ್ ಎದುರು ನಡುರಸ್ತೆಯಲ್ಲಿ ಮಳೆಯಲ್ಲೆ ನಿಂತಿದ್ದ ಶಿವಕುಮಾರ್, ಮುಂಬೈ ಪೊಲೀಸರಿಗೆ ಎಷ್ಟು ಮನವಿ ಮಾಡಿದರೂ ಆವರನ್ನು ಹೊಟೇಲ್ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗಿಲ್ಲ. ಅಲ್ಲದೇ, ಹೊಟೇಲ್ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದರು. ಶಾಸಕರ ಮನವೊಲಿಕೆಗೆ ಹಲವು ಸಮಯ ರಸ್ತೆಯಲ್ಲಿದ್ದ ಡಿ.ಕೆ.ಶಿವಕುಮಾರ್, ರಸ್ತೆ ಬದಿಯಲ್ಲಿಯೇ ತಿಂಡಿ ಸೇವಿಸಿದರು.
ನಾನು ಸಚಿವನಲ್ಲ, ಒಬ್ಬ ಸಾಮಾನ್ಯ ನಾಗರಿಕ. ನಾನೇನು ಉಗ್ರಗಾಮಿಯಲ್ಲ. ಇವೆಲ್ಲ ರಾಜಕೀಯ ತಂತ್ರಗಳು ಅಷ್ಟೇ. ನಾನು ನಮ್ಮ ಪಕ್ಷದ ಶಾಸಕರನ್ನು ಭೇಟಿಯಾಗಲು ಬಂದಿದ್ದೇನೆ. ಅದಕ್ಕೆ ನಿರ್ಬಂಧ ವಿಧಿಸಲು ಇವರು ಯಾರು. ನಾನು ನಮ್ಮ ಶಾಸಕರನ್ನು ಭೇಟಿ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ನಾನು ಕಾಯ್ದಿರಿಸಿರುವ ಕೊಠಡಿಯೊಳಗೆ ಹೋಗಲು ಅನುಮತಿ ನೀಡುತ್ತಿಲ್ಲ. ಭದ್ರತೆಯ ದೃಷ್ಟಿಯಿಂದ ಬದಲಾವಣೆ ಮಾಡಿರುವುದಾಗಿ ತಿಳಿಸುತ್ತಿದ್ದಾರೆ. ನನ್ನಿಂದ ಯಾರಿಗೂ ಯಾವುದೇ ಅಪಾಯವಿಲ್ಲ. ನಾನು ಯಾವುದೇ ಅನಾಹುತ ಮಾಡುವುದಿಲ್ಲ. ನನ್ನ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಆದರೂ, ನನ್ನನ್ನು ಯಾಕೆ ತಡೆಯಲಾಗುತ್ತಿದೆ ಎಂದು ಅವರು ಪೊಲೀಸರ ಮನವೊಲಿಕೆಗೆ ಪ್ರಯತ್ನಿಸಿದರು.
ನನ್ನ ಸ್ನೇಹಿತರು ಈ ಹೊಟೇಲ್ನಲ್ಲಿ ತಂಗಿದ್ದಾರೆ. ಅವರ ಜೊತೆ ಕೂತು ಮಾತನಾಡಬೇಕು. ದಯವಿಟ್ಟು ನನಗೆ ಒಳಗೆ ಹೋಗಲು ಅವಕಾಶ ನೀಡಿ ಶಿವಕುಮಾರ್ ಮನವಿ ಮಾಡಿದರು. ಆದರೆ, ಇದಕ್ಕೆ ಒಪ್ಪದ ಪೊಲೀಸರು, ಡಿ.ಕೆ.ಶಿವಕುಮಾರ್, ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ ಸೇರಿದಂತೆ ಇನ್ನಿತರರನ್ನು ಮುಂಬೈ ವಿಮಾನ ನಿಲ್ದಾಣದ ಸಮೀಪದ ಅತಿಥಿಗೃಹಕ್ಕೆ ಕರೆದೊಯ್ದರು.