ಇಂಡಿಯನ್ ಸೋಶಿಯಲ್ ಫೋರಂ ನಿಯೋಗದಿಂದ ದ.ಕ. ಜಿಲ್ಲಾಧಿಕಾರಿ ಭೇಟಿ
'ಅನಿವಾಸಿ ಕನ್ನಡಿಗರಿಗಾಗಿ ಅಹವಾಲು ಕೇಂದ್ರ ತೆರೆಯುವ ಭರವಸೆ'
ಮಂಗಳೂರು: ಗಲ್ಫ್ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ಮರಳುತ್ತಿರುವ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಂಕಷ್ಟ ಮತ್ತು ಅದರ ಪರಿಹಾರ ಮಾರ್ಗಗಳ ಬಗ್ಗೆ ವರ್ಷದ ಹಿಂದೆ ಸಲ್ಲಿಸಲಾಗಿದ್ದ ಅಧ್ಯಯನ ವರದಿಯ ಪ್ರಗತಿಯ ಬಗ್ಗೆ ಚರ್ಚಿಸುವುದಕ್ಕಾಗಿ ಇಂಡಿಯನ್ ಸೋಶಿಯಲ್ ಫೋರಂ (ಐಎಸ್ಎಫ್) ಮತ್ತು ಅನಿವಾಸಿ ಕನ್ನಡಿಗರ ಪುನರ್ವಸತಿ ಸಮಿತಿಯ ಜಂಟಿ ನಿಯೋಗವು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.
ರಾಜ್ಯದಲ್ಲಿ ಎಲ್ಲೂ ಅನಿವಾಸಿ ಕನ್ನಡಿಗರ ನೋಂದಣಿ ಕೇಂದ್ರ ಇಲ್ಲದೇ ಇರುವುದರಿಂದ ರಾಜ್ಯ ಸರಕಾರದ ಬಳಿ ಅನಿವಾಸಿ ಕನ್ನಡಿಗರ ಬಗೆಗಿನ ಯಾವುದೇ ನಿಖರ ದತ್ತಾಂಶವಿಲ್ಲ ಎಂಬ ಸಂಗತಿಯನ್ನು ಮನಗಂಡ ಜಿಲ್ಲಾಧಿಕಾರಿ ಸೆಂಥಿಲ್ ಅವರು ದ.ಕ. ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಅನಿವಾಸಿ ಕನ್ನಡಿಗರಿಗಾಗಿಯೇ ಅಹವಾಲು ಕೇಂದ್ರವನ್ನು ತೆರೆಯುವ ಬಗ್ಗೆ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಪದಾಧಿಕಾರಿಗಳಾದ ಸಲೀಂ ಗುರುವಾಯನಕೆರೆ, ಮಜೀದ್ ಆಲಡ್ಕ, ಹಾರಿಸ್ ಗೂಡಿನಬಳಿ, ಮುಸ್ತಫಾ ಬಜ್ಪೆ, ಇಬ್ರಾಹಿಂ ಅಗ್ನಾಡಿ ಉಪಸ್ಥಿತರಿದ್ದರು.