ರಿಯಾದ್: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ವಾರ್ಷಿಕ ಮಹಾಸಭೆ
ರಿಯಾದ್: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ ರಿಯಾದ್ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಇವರ ಅಧ್ಯಕ್ಷತೆಯಲ್ಲಿ ಭತ್ತ ಅಪೊಲೊ ಡಿಮೋರ ಹೋಟೆಲ್'ನ ಬಾಂಕ್ವೆಟ್ ಹಾಲ್'ನಲ್ಲಿ ಇತ್ತೀಚೆಗೆ ನಡೆಯಿತು.
ದಾವೂದ್ ಸಅದಿ ಉರುವಾಳುಪದವು ಕಿರಾಅತ್ ಪಠಿಸಿದರು, ಹನೀಫ್ ಎನ್ ಎಸ್ ಸ್ವಾಗತಿಸಿದರು. ಡಿ ಕೆ ಎಂ ಒ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಅಧ್ಯಕ್ಷತೆ ವಹಿಸಿದ್ದರು.
ಡಿ.ಕೆ.ಎಂ.ಒ ಇದರ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಸುಲೈಮಾನ್ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮುಖ್ಯ ಅತಿಥಿ ಕೇರಳ ನೂರ್ಕಾ ಕನ್ಸಲ್ಟೆಂಟ್, ಭಾರತೀಯ ಪ್ರವಾಸಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಶಿಹಾಬ್ ಕೊಟ್ಟುಕ್ಕಾಡ್ ಮಾತನಾಡಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಮತ್ತು ಅನಿವಾಸಿಗಳಿಗೆ ಸಂಘಟನೆ ಮಾಡಿದ ಸಹಾಯ ಸಹಕಾರಗಳನ್ನು ಶ್ಲಾಘಿಸಿದರು.
ಡಾ. ಶಫೀಕ್ ಕಿಂಗ್ ಸೌದ್ ಯೂನಿವರ್ಸಿಟಿ ಸಭೆಗೆ ಉತ್ತಮ ಸಲಹೆಗಳನ್ನು ನೀಡಿದರು. ಡಿ ಕೆ ಎಂ ಒ ಉಪಾಧ್ಯಕ್ಷ ಫಝ್ಲು ರಹ್ಮಾನ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಮಾತನಾಡಿ ತನ್ನ ಅಧಿಕಾರವಧಿಯಲ್ಲಿ ತನಗೆ ಸಕ್ರಿಯ ಬೆಂಬಲ ನೀಡಿದ ಎಲ್ಲ ಸದಸ್ಯರು, ಸಂಘಟನೆಯನ್ನು ಬೆಂಬಲಿಸುವ ದಾನಿಗಳು ಮತ್ತು ಕಾರ್ಯಕಾರಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಫ್ಯಾಮಿಲಿ ರಿಲೀಫ್ ಫಂಡ್ ಯೋಜನೆಯ ಬಗೆ ವಿವರಿಸಿದ ಅವರು ಅನಿವಾಸಿ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ 3 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು. ಹಲವು ವರ್ಷಗಳಿಂದ ನೀಡುತ್ತಿರುವ ಸಾಲ ಯೋಜನೆಯನ್ನು ಮುಂದುವರಿಸುವುದು, ಸರಕಾರದಿಂದ ಸಿಗುವ ಆರೋಗ್ಯ ಮತ್ತು ಇನ್ನಿತರ ಹಲವಾರು ಯೋಜನೆಗಳ ದಾಖಲೆ ಪತ್ರಗಳನ್ನು ಉಚಿತವಾಗಿ ಸರಿಪಡಿಸಿಕೊಡಲು ಮಂಗಳೂರಿನಲ್ಲಿ ಪ್ರತಿನಿಧಿಯನ್ನು ನೇಮಿಸಲಾಗಿದೆ. ಅನಿವಾಸಿಗಳಿಗೆ ಉದ್ಯೋಗ, ಕಂಪನಿಯಲ್ಲಿ ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ತಂಡವನ್ನು ರಚಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಯೂಸುಫ್ ಕಲಿಂಜಬೈಲ್ , ಫಝುಲ್ ರಹ್ಮಾನ್ ಮತ್ತು ಘನಿ ಅಹ್ಮದ್ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು. ನಂತರ ಮುಸ್ತಾಕ್ ಅಹ್ಮದ್ ಮತ್ತು ಸಾಹುಲ್ ಹಮೀದ್ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಬಜ್ಪೆ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಸೀಫ್ ಕಣ್ಣೂರು, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಸುಲೈಮಾನ್ ಯರ್ಮಾಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಿ ಕೆ ಶೇಖ್ ಕೂಳೂರು, ಫಝಲು ರಹ್ಮಾನ್ ಗಂಗೊಳ್ಳಿ , ಕಾರ್ಯದರ್ಶಿಗಳಾಗಿ ಅಲ್ತಾಫ್ ಗಂಜಿಮಠ, ಯೂಸುಫ್ ಅಡ್ಡೂರ್ ಲೆಕ್ಕ ಪರಿಶೋಧಕರಾಗಿ ಮುಸ್ತಾಕ್ ಅಹ್ಮದ್ ಹಾಗು 16 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಲ್ಮಾನ್ ನೂರ್ ವಂದಿಸಿ, ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.