ನಾಳೆಯಿಂದ ವಿಧಾನ ಮಂಡಲ ಅಧಿವೇಶನ: ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಕಲಾಪದತ್ತ ರಾಜ್ಯ ರಾಜಕೀಯ, ಸಾರ್ವಜನಿಕ ವಲಯದ ಚಿತ್ತ
ಬೆಂಗಳೂರು, ಜು. 11: ಶಾಸಕರ ರಾಜೀನಾಮೆ ಪ್ರಹಸನದ ಹಿನ್ನೆಲೆಯಲ್ಲಿ ನಾಳೆ (ಜು.12) ಮಧ್ಯಾಹ್ನ 12:30ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನ ಕಲಾಪ ದತ್ತ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದ ಚಿತ್ತ ನೆಟ್ಟಿದೆ.
‘ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಹುಮತ ಕಳೆದುಕೊಂಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಧಿವೇಶನ ಕರೆಯುವ ನೈತಿಕತೆಯೇ ಇಲ್ಲ’ ಎಂದು ವಿಪಕ್ಷ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಈ ಮಧ್ಯೆ ‘ಅಧಿವೇಶನಕ್ಕೆ ಮೈತ್ರಿ ಪಕ್ಷಗಳ ಎಲ್ಲ ಸದಸ್ಯರು ಹಾಜರಿದ್ದು ಸರಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ವಿಪ್ ಜಾರಿ ಮಾಡಲಾಗಿದೆ.
‘ಒಂದು ವೇಳೆ ಸದನಕ್ಕೆ ತಾವು (ಸದಸ್ಯರು) ಹಾಜರಾಗದಿದ್ದಲ್ಲಿ ಅಥವಾ ಸರಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ, ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಛೇದ-10ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಸರಕಾರಿ ಮುಖ್ಯ ಸಚೇತಕ ಗಣೇಶ್ ಪಿ.ಹುಕ್ಕೇರಿ ವಿಪ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಶಾಸಕರು ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪೀಕರ್ ರಮೇಶ್ಕುಮಾರ್ ಅವರ ಮುಂದೆ ಹಾಜರಾಗಿದ್ದು ‘ಕ್ರಮಬದ್ಧ’ ರೀತಿಯಲ್ಲಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಸ್ಪೀಕರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ. ವಿಪಕ್ಷ ಬಿಜೆಪಿ ಸದನದಲ್ಲಿ ಸರಕಾರದ ವಿರುದ್ಧ ಹೇಗೆ ಹೋರಾಟ ನಡೆಸಲಿದೆ. ವಿಪಕ್ಷ ಬಿಜೆಪಿ ಅಸ್ತ್ರಕ್ಕೆ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಏನು ಸಮರ್ಥನೆ ನೀಡಲಿದೆ. ಜೊತೆಗೆ ಸರಕಾರ ಉಳಿಸಿಕೊಳ್ಳಲು ಯಾವ ರೀತಿಯಲ್ಲಿ ಪ್ರತ್ಯಾಸ್ತ್ರ ಪ್ರಯೋಗಿಸಲಿದೆ ಎಂಬ ಕುತೂಹಲ ರಾಜಕೀಯ ಮುಖಂಡರು ಹಾಗೂ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.
ಶಕ್ತಿಕೇಂದ್ರಕ್ಕೆ ಪೊಲೀಸ್ ಸರ್ಪಗಾವಲು: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಭದ್ರತೆ ಉಸ್ತುವಾರಿಗೆ ಖುದ್ದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು, ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ವಿಧಾನಸೌಧದ ಸಚಿವಾಲಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಶಕ್ತಿಕೇಂದ್ರ ಪ್ರವೇಶಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗಿದೆ.
ಇಡೀ ವಿಧಾನಸೌಧ ಒಂದು ರೀತಿಯಲ್ಲಿ ಪೊಲೀಸರ ಕೈವಶದಲ್ಲಿರುವಂತೆ ಭಾಸವಾಗಿದೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಿಯೇ ಒಳ ಬಿಡಲಾಗುತ್ತಿದ್ದು, ಕೇವಲ ಪೂರ್ವ ಮತ್ತು ಪಶ್ಚಿಮ ದ್ವಾರದಿಂದ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಕಲ್ಪಿಸಲಾಗಿದ್ದು, ದಕ್ಷಿಣ ಮತ್ತು ವಿಕಾಸಸೌಧದ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿದೆ.
ವಿಧಾನಸೌಧದ ಪ್ರತಿಯೊಂದು ಮಹಡಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದು, ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ತೆರಳಲು ನಿರ್ಬಂಧ ಹೇರಲಾಗಿದ್ದು, ಪ್ರತಿ ಮಹಡಿ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಸಚಿವಾಲಯ ಸಿಬ್ಬಂದಿ ಕಡತಗಳನ್ನು ಒಂದು ಕಡೆಯಿಂದ ಮತ್ತೊಂದು ಕಚೇರಿಗೆ ಕೊಂಡೊಯ್ಯಲು ಸಂಕಷ್ಟ ಅನುಭವಿಸಬೇಕಾಯಿತು.
ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರಿಂದ ಸದಾ ಗಿಜಿಗುಡುತ್ತಿದ್ದ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಎಲ್ಲಿ ನೋಡಿದರೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ತುಂಬಿ ತುಳುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.