ಯಾಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ: ದುಗುಡದಲ್ಲಿದ್ದ ಮೈತ್ರಿ ಶಾಸಕರು ನಿರಾಳ
![ಯಾಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ: ದುಗುಡದಲ್ಲಿದ್ದ ಮೈತ್ರಿ ಶಾಸಕರು ನಿರಾಳ ಯಾಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ: ದುಗುಡದಲ್ಲಿದ್ದ ಮೈತ್ರಿ ಶಾಸಕರು ನಿರಾಳ](https://www.varthabharati.in/sites/default/files/images/articles/2019/07/12/200113-1562936818.jpg)
ಬೆಂಗಳೂರು, ಜು. 12: ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಯಾಥಾಸ್ಥಿತಿ ಕಾಪಾಡಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೇಲೆ ಕವಿದಿದ್ದ ಕಾರ್ಮೋಡ ತಾತ್ಕಾಲಿಕವಾಗಿ ಸರಿದಂತಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಸುಪ್ರೀಂ ಕೋರ್ಟ್ ವಿಚಾರಣೆ ಮತ್ತು ತೀರ್ಪಿನತ್ತ ಉಭಯ ಸದನದ ಎಲ್ಲ ಸದಸ್ಯರ ನಿರೀಕ್ಷೆ ಇತ್ತು. ಮಧ್ಯಾಹ್ನ 1:30ರ ಸುಮಾರಿಗೆ ತೀರ್ಪು ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಆಡಳಿತ ಪಕ್ಷದ ಸದಸ್ಯರಲ್ಲಿ ನಿರಾಳ ಭಾವ ಆವರಿಸಿತ್ತು.
ಕಲಾಪ ಆರಂಭದಲ್ಲಿ ಅತ್ಯಂತ ಗಂಭೀರವಾಗಿ ಕುಳಿತಿದ್ದ ಮೈತ್ರಿ ಪಕ್ಷಗಳ ಶಾಸಕರು ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇದ್ದಕ್ಕಿಂದ್ದಂತೆ ತಣ್ಣಗಾದರು. ಮಂಗಳವಾರದ (ಜು.16) ವರೆಗೆ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂಬುದು ಖಚಿತ ಆಗುತ್ತಿದ್ದಂತೆ ಶಾಸಕರು ಪರಸ್ಪರ ಹರಟೆಯಲ್ಲಿ ತೊಡಗಿದ್ದರು.
ಸಿಎಂ-ಸ್ಪೀಕರ್ ಚರ್ಚೆ: ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್ ಕುಮಾರ್ ಮಹತ್ವದ ಸಮಾಲೋಚನೆ ನಡೆಸಿದರು. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಚರ್ಚೆಗೆ ಗ್ರಾಸವಾಗಿದೆ.