"ಜೈ ಶ್ರೀರಾಮ್ ಘೋಷಣೆಯನ್ನು ಥಳಿಸಲು ಬಳಸಲಾಗುತ್ತಿದೆ": ಅಮರ್ತ್ಯ ಸೇನ್ ಹೇಳಿಕೆಯ ಪೋಸ್ಟರ್ ಗಳು ಪ್ರತ್ಯಕ್ಷ !

ಕೋಲ್ಕತಾ,ಜು.12: ‘ಜೈ ಶ್ರೀರಾಮ್’ ಘೋಷಣೆ ಕುರಿತು ಜೂ.5ರಂದು ಜಾದವಪುರ ವಿವಿಯಯ ಸಂವಾದ ಕಾರ್ಯಕ್ರಮವೊಂದರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿಕೆಗಳು ಮತ್ತು ಅವರ ಚಿತ್ರಗಳಿರುವ ಪೋಸ್ಟರ್ಗಳು ಕೋಲ್ಕತಾದ ಪ್ರಮುಖ ಕೂಡುರಸ್ತೆಗಳಲ್ಲಿ ಕಾಣಿಸಿಕೊಂಡಿವೆ.
“ಈ ಹಿಂದೆಂದೂ ನಾನು ಜೈ ಶ್ರೀರಾಮ ಘೋಷಣೆಯನ್ನು ಕೇಳಿರಲಿಲ್ಲ. ಈ ದಿನಗಳಲ್ಲಿ ಜನರನ್ನು ಥಳಿಸಲು ಅದನ್ನು ಬಳಸಲಾಗುತ್ತಿದೆ. ಬಂಗಾಳಿ ಸಂಸ್ಕೃತಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಭಾವಿಸಿದ್ದೇನೆ” ಎಂಬ ಸೇನ್ ಅವರ ಹೇಳಿಕೆಗಳು ಈ ಪೋಸ್ಟರ್ಗಳಲ್ಲಿವೆ.
“ನಿನ್ನ ಇಷ್ಟದ ದೇವರು ಯಾರು ಎಂದು ನನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಪ್ರಶ್ನಿಸಿದ್ದೆ. ದುರ್ಗಾ ಮಾತೆ ಎಂದು ಅವಳು ಉತ್ತರಿಸಿದ್ದಳು. ದುರ್ಗಾ ಮಾತೆಗೂ ರಾಮ ನವಮಿಗೂ ಯಾವುದೇ ಹೋಲಿಕೆಯಿಲ್ಲ” ಎಂದು ಸೇನ್ ಹೇಳಿದ್ದೂ ಪೋಸ್ಟರ್ನಲ್ಲಿ ಮುದ್ರಣಗೊಂಡಿದೆ.
ನಗರದ ಪ್ರಜೆಗಳು ಈ ಪೋಸ್ಟರ್ ಹಾಕಿದ್ದಾರೆಂದು ನಮೂದಿಸಲಾಗಿದೆಯಾದರೂ ಅವರ ಗುರುತಿನ ಯಾವದೇ ವಿವರಗಳಿಲ್ಲ.
ಪೋಸ್ಟರ್ಗಳನ್ನು ನೀಲಿ ಮತ್ತು ಬಿಳಿಯ ಬಣ್ಣಗಳಲ್ಲಿ ರಚಿಸಲಾಗಿದ್ದು,ಇವು ತೃಣಮೂಲ ಮುಖ್ಯಸ್ಥೆ ಮತ್ತು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಷ್ಟದ ಬಣ್ಣಗಳಾಗಿವೆ.
ಪೋಸ್ಟರ್ಗಳ ಹಿಂದೆ ತನ್ನ ಕೈವಾಡವನ್ನು ತೃಣಮೂಲ ನಿರಾಕರಿಸಿದೆಯಾದರೂ ಸೇನ್ ಹೇಳಿಕೆಗಳನ್ನು ಅದು ಸ್ವಾಗತಿಸಿದೆ.
ನಾಗರಿಕ ಸಮಾಜ ಮತ್ತು ನಾಗರಿಕರು ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ ರಾಜ್ಯದ ನಗರಾಭಿವೃದ್ಧ್ದಿ ಸಚಿವ ಫರ್ಹಾದ್ ಹಕೀಂ ಅವರು,ಈ ಕಾರ್ಯವನ್ನು ಪ್ರಶಂಸಿಸಿದರು.
ಸೇನ್ ಅವರು ಬಂಗಾಳದ ಮತ್ತು ಭಾರತದ ಹೆವ್ಮೆುಯಾಗಿದ್ದಾರೆ. ಬಿಜೆಪಿ ಇದನ್ನು ನಂಬುವುದಿಲ್ಲ,ಆದರೆ ಆ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ ಎಂದರು.
ರಾಜ್ಯದ ಜನತೆಯನ್ನು ಅವಮಾನಿಸಲು ಒಡಕು ಮೂಡಿಸುವ ರೀತಿಯಲ್ಲಿ ಜೈ ಶ್ರೀರಾಮ ಘೋಷಣೆಯನ್ನು ಬಳಸಲಾಗುತ್ತಿದೆ ಎಂದರು.