ಡಿ.ಕೆ.ಶಿವಕುಮಾರ್ 'ಒನ್ ಮ್ಯಾನ್ ಆರ್ಮಿ' ಥರ ಮುನ್ನುಗ್ಗುತ್ತಿದ್ದಾರೆ: ಬಿಜೆಪಿ ನಾಯಕ ವಿ.ಸೋಮಣ್ಣ
"ಬಿಜೆಪಿಗೆ ರಿವರ್ಸ್ ಆಪರೇಷನ್ ಭೀತಿಯಿಲ್ಲ"
![ಡಿ.ಕೆ.ಶಿವಕುಮಾರ್ ಒನ್ ಮ್ಯಾನ್ ಆರ್ಮಿ ಥರ ಮುನ್ನುಗ್ಗುತ್ತಿದ್ದಾರೆ: ಬಿಜೆಪಿ ನಾಯಕ ವಿ.ಸೋಮಣ್ಣ ಡಿ.ಕೆ.ಶಿವಕುಮಾರ್ ಒನ್ ಮ್ಯಾನ್ ಆರ್ಮಿ ಥರ ಮುನ್ನುಗ್ಗುತ್ತಿದ್ದಾರೆ: ಬಿಜೆಪಿ ನಾಯಕ ವಿ.ಸೋಮಣ್ಣ](https://www.varthabharati.in/sites/default/files/images/articles/2019/07/13/200284-1563022385.jpg)
ಬೆಂಗಳೂರು, ಜು.13: ಬಿಜೆಪಿಗೆ ರಿವರ್ಸ್ ಆಪರೇಷನ್ ಭೀತಿಯಿಲ್ಲ. ರಾಜ್ಯವನ್ನು ಕತ್ತಲಕೋಣೆಯಲ್ಲಿ ಇಟ್ಟಿರುವ ಮೈತ್ರಿ ನಾಯಕರಿಗೆ ಮುಂದೇನಾಗುತ್ತೆ ಎನ್ನುವ ಹೆದರಿಕೆ ಇದೆ ಎಂದು ಬಿಜೆಪಿ ನಾಯಕ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಸೇರಿ ಒಂದು ಕಡೆ ಮಾತುಕತೆ ಮಾಡಿಕೊಳ್ಳುತ್ತೇವೆ. ಅದಕ್ಕೆ ಬೇರೆ ಅರ್ಥ ಕಟ್ಟಿಕೊಡುವ ಅಗತ್ಯವಿಲ್ಲ. ಇದೀಗ ನಡೆಯುತ್ತಿರುವ ರಾಜಕಾರಣದ ಎಲ್ಲ ಗೊಂದಲಗಳೂ ಮಂಗಳವಾರ ಮುಗಿಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕುಮಾರಸ್ವಾಮಿಗೆ ಆ ಕಡೆಗೆ ಗಮನವಿರಬೇಕಿತ್ತು. ಆದರೆ, ಅವರ ನಡವಳಿಕೆ ಹಾಗೂ ಮಾತು ನೋಡಿದರೆ ಯಾವುದೇ ಕಾಳಜಿಯಿಲ್ಲದಿರುವುದು ಕಾಣುತ್ತದೆ. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿಯೇ ಇಂತಹ ಕೆಟ್ಟ ರಾಜಕೀಯ ನೋಡಿರಲಿಲ್ಲ. ಬೀದಿ ಬೀದಿಯಲ್ಲಿ ಕಿತ್ತಾಡಿಕೊಂಡಂತಹುದು ಕಾಣಲಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಒನ್ ಮ್ಯಾನ್ ಆರ್ಮಿ ಥರ ಮುನ್ನುಗ್ಗುತ್ತಿದ್ದಾರೆ. ನಾನು ಈವರೆಗೆ ನೋಡಿದ್ದ ಡಿಕೆಶಿನೇ ಬೇರೆ, ಈಗ ಕಾಣಿಸುತ್ತಿರುವ ಡಿಕೆಶಿನೇ ಬೇರೆ. ಅಧಿಕಾರಕ್ಕಾಗಿ ಅವರು ಏನೆಲ್ಲಾ ಮಾಡುತ್ತಾರೆ. ಎಲ್ಲಿಗೆ ಹೋದರೂ ಕ್ಯಾಮೆರಾದವರನ್ನು ಜತೆಗಿಟ್ಟುಕೊಂಡು ಹೋಗುತ್ತಾರೆ. ತಾನು ಮಾಡುವ ಎಲ್ಲ ಕೆಲಸಗಳನ್ನು ರೆಕಾರ್ಡ್ ಮಾಡಿಸಿ, ಯಾರಿಗೆ ಕಳಿಸಬೇಕೋ ಅವರಿಗೆ ಕಳಿಸುತ್ತಿದ್ದಾರೆ ಎಂದು ಅವರು ನುಡಿದರು.