ಜೈ ಶ್ರೀರಾಮ್’ ಹೇಳುವಂತೆ ಯಾರನ್ನೂ ಬಲವಂತಗೊಳಿಸಬಾರದು: ಸಚಿವ ನಖ್ವಿ

ಹೊಸದಿಲ್ಲಿ,ಜು.13: ‘ಜೈ ಶ್ರೀರಾಮ್’ನಂತಹ ಯಾವುದೇ ಧಾರ್ಮಿಕ ಘೋಷಣೆಯನ್ನು ಕೂಗುವಂತೆ ಯಾರನ್ನೂ ಬಲವಂತಗೊಳಿಸಬಾರದು ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಹೇಳಿದ್ದಾರೆ.
ಯಾರೇ ಆದರೂ ಏನಾದರೂ ಮಾಡುವಂತೆ ಯಾರನ್ನೂ ಬಲವಂತಗೊಳಿಸಬಾರದು ಎಂದು ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ ನಖ್ವಿ, ಆದರೆ ‘ವಂದೇ ಮಾತರಂ’ ಹಾಡಲು ಯಾರೂ ನಿರಾಕರಿಸುವಂತಿಲ್ಲ. ಯಾರೂ ಇದನ್ನು ವಿರೋಧಿಸಬಾರದು ಎಂದರು.
ಯಾವುದೇ ಗ್ರಾಮಕ್ಕೆ ಹೋದರೂ ಆತ ಹಿಂದೂ ಅಥವಾ ಮುಸ್ಲಿಂ ಆಗಿರಲಿ,ಪ್ರತಿ ವ್ಯಕ್ತಿಯೂ ‘ರಾಮ್ ರಾಮ್’ ಎನ್ನುವ ಮೂಲಕ ಸ್ವಾಗತಿಸುತ್ತಾನೆ. ದೇಶವು ತನ್ನ ಅಲ್ಪಸಂಖ್ಯಾತರಿಂದಾಗಿ ಜಾತ್ಯತೀತವಾಗಿರುವುದಲ್ಲ, ಅದು ಬಹುಸಂಖ್ಯಾತ ಸಮುದಾಯದ ಡಿಎನ್ಎದಲ್ಲಿದೆ ಎಂದು ಅವರು ಹೇಳಿದರು.
‘ಜೈ ಶ್ರೀ ರಾಮ್’ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಜನರನ್ನು ಥಳಿಸಿದ ಘಟನೆಗಳು ಜಾರ್ಖಂಡ್, ಮಹಾರಾಷ್ಟ್ರ, ಪ.ಬಂಗಾಳ ಮತ್ತು ಉತ್ತರ ಪ್ರದೇಶಗಳಿಂದ ವರದಿಯಾಗಿರುವ ಈ ಸಮಯದಲ್ಲಿ ಸಚಿವರ ಹೇಳಿಕೆಯು ಹೊರಬಿದ್ದಿದೆ. ಇಂತಹ ತೀರ ಇತ್ತೀಚಿನ ಘಟನೆಯಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ‘ಜೈ ಶ್ರೀರಾಮ್’ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಜನರ ಗುಂಪೊಂದು ಮದ್ರಸಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ.
ಗುಂಪಿನಿಂದ ಥಳಿತ-ಹತ್ಯೆ ಕುರಿತಂತೆ ನಖ್ವಿ ಅವರು,ಇಂತಹ ಅಪರಾಧಗಳನ್ನು ತಡೆಯಲು ಸಾಕಷ್ಟು ಕಾನೂನುಗಳಿವೆ. ಆರೋಪಿಗಳನ್ನು ಸೆರೆ ಹಿಡಿಯದ ಇಂತಹ ಒಂದೇ ಒಂದು ಪ್ರಕರಣವನ್ನು ಹೇಳಿ ನೋಡೋಣ. ರಾಜಸ್ಥಾನದಲ್ಲಿ ಆರೋಪಿಗಳಿಗೆ ಆರು ತಿಂಗಳವರೆಗೆ ಜಾಮೀನು ದೊರೆಯಲಿಲ್ಲ. ಉತ್ತರ ಪ್ರದೇಶದಲ್ಲಿ ನಾಲ್ಕು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆ ಯಾವುದೇ ಆಗಿರಲಿ,ತಕ್ಷಣವೇ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಕೋಮು ಗಲಭೆಗಳು ನಡೆದಿಲ್ಲ ಎಂದು ಅವರು ಬೆಟ್ಟು ಮಾಡಿದರು.
ತ್ರಿವಳಿ ತಲಾಕ್ ಮಸೂದೆಯು ರಾಜಕೀಯ ಪ್ರೇರಿತವಲ್ಲ ಎಂದ ಹೇಳಿದ ಅವರು, ಅದು ಉಭಯ ಸದನಗಳಲ್ಲಿ ಅಂಗೀಕಾರಗೊಳ್ಳಲಿದೆ ಎಂದರು.