ಕಾಲಾವಕಾಶ ನೀಡಲು ಮನವಿ ಮಾಡಿರುವೆ: ಎಂಟಿಬಿ ನಾಗರಾಜ್
ಬೆಂಗಳೂರು, ಜು.13: ಪಕ್ಷದ ಹಿರಿಯ ನಾಯಕರ ಮಾತಿಗೆ ಬೆಲೆಕೊಟ್ಟು ಕಾಲಾವಕಾಶ ನೀಡುವಂತೆ ಕೇಳಿದ್ದೇನೆ ಎಂದು ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡು ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರದ ಬಗ್ಗೆ ಅಸಮಾಧಾನವಿದ್ದ ಕಾರಣದಿಂದಲೇ ನಾನು ರಾಜೀನಾಮೆ ನೀಡಿದ್ದೆ. ಆದರೆ, ಇದೀಗ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಅವರ ಮಾತಿಗೆ ಬೆಲೆಕೊಟ್ಟು ಸಮಯ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.
ಎಲ್ಲ ಪಕ್ಷಗಳಲ್ಲಿ ಅಸಮಾಧಾನ ಇದ್ದೇ ಇರುತ್ತದೆ. ಎಲ್ಲರೂ ಜೊತೆಗೂಡಿ ಹೋಗಬೇಕು ಅಂತ ಅಂದುಕೊಂಡಿದ್ದೇವೆ. ಮುಂದೇನಾಗುತ್ತೋ ನೋಡಬೇಕು. ನನ್ನ ಕೈಲಾಗುವ ಪ್ರಯತ್ನ ನಾನು ಮಾಡ್ತೀನಿ ಎಂದ ಅವರು, ರಾಜೀನಾಮೆ ಹಿಂಪಡೆಯುವ ಸಂಬಂಧ ಯಾವುದೇ ಸುಳಿವು ನೀಡಲಿಲ್ಲ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಜೊತೆಗೆ ಚರ್ಚೆ ಮಾಡಿ, ಅವರನ್ನು ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸುತ್ತೇನೆ. ನನಗಂತೂ ಇಲ್ಲಿಯೇ (ಕಾಂಗ್ರೆಸ್) ಉಳಿಯಬೇಕು ಅಂತ ಇದೆ ಎಂದು ತಿಳಿಸಿದರು.