ತುಳುವರ ಸಂಸ್ಕೃತಿಯಲ್ಲೂ ಹಲಸಿಗೆ ಸ್ಥಾನವಿದೆ: ದಿನಕರ ಬಾಬು

ಉಡುಪಿ, ಜು.13: ಕೆಲವರ್ಷಗಳ ಹಿಂದಿನವರೆಗೂ ಕರಾವಳಿಯ ಬಡ ಜನರ ಆಹಾರವಾಗಿದ್ದ ಹಲಸು, ಇಂದು ಆಧುನಿಕತೆಯ ಭರಾಟೆಯಲ್ಲಿ ಕಡೆಗಣನೆಗೆ ಒಳಗಾಗಿದೆ. ಹೀಗಾಗಿ ಇಂದಿನ ಮಕ್ಕಳು ಹಲಸಿನ ಕುರಿತು ನಿರ್ಲಕ್ಷದ ಭಾವನೆ ಹೊಂದಿದ್ದಾರೆ. ಕರಾವಳಿಯ ಅಲ್ಲಲ್ಲಿ ನಡೆಯುವ ಹಲಸಿನ ಮೇಳಗಳ ಮೂಲಕ ಜನರಿಗೆ ಮತ್ತೆ ಹಲಸಿನ ಬಹುಪಯೋಗಿ ಗುಣ ಅರಿವಿಗೆ ಬರಲು ಸಾಧ್ಯ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳವನ್ನು ದೀಪ ಬೆಳಗಿಸಿ, ಹಲಸಿನ ಹಣ್ಣೊಂದನ್ನು ತುಂಡು ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರಾವಳಿಯ ಸಂಸ್ಕೃತಿಯಲ್ಲೂ ಹಲಸಿನ ಹಣ್ಣಿಗೆ ವಿಶಿಷ್ಟ ಸ್ಥಾನವಿದೆ. ತುಳುವರು ಆಚರಿಸುವ ಭೂತಾರಾಧನೆ, ದೈವಾರಾಧನೆಯಲ್ಲೂ ಹಲಸಿನ ಹಣ್ಣು ಸ್ಥಾನವನ್ನು ಪಡೆದಿದೆ. ಪೌಷ್ಠಿಕಾಂಶಗಳಿಂದ ಕೂಡಿರುವ ಹಲಸು ಉತ್ತಮ ಆಹಾರವಾ ಗಿಯೂ ಬಳಕೆಯಾಗುವ ಅರ್ಹತೆ ಹೊಂದಿದೆ. ಹಲಸಿನ ಮೇಳಗಳ ಮೂಲಕ ಇವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಅದರ ಸದ್ಭಳಕೆಯಾಗಲಿ ಎಂದವರು ಹಾರೈಸಿದರು.
ಒಂದು ಅಂಕಿ ಅಂಶದ ಪ್ರಕಾರ ಮರ ಹಾಗೂ ಕಾಡು ಕಡಿಯುವುದರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿವೆ. ಪರಿಸರದ ಕುರಿತಂತೆ ಜನರಲ್ಲಿ ಜಾಗೃತಿ, ಅರಿವು ಮೂಡಬೇಕಾದ ಕಾಲ ಬಂದಿದೆ. ಇರುವ ಮರಗಳನ್ನು ಉಳಿಸಿಕೊಂಡು, ಇನ್ನಷ್ಟು ನಡೆವ ಮೂಲಕ ಪರಿಸರದ ಸಂರಕ್ಷಣೆಯಾಗಲಿ ಎಂದು ದಿನಕರ ಬಾಬು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಸಸ್ಯಾಗಾರಗಳಲ್ಲಿರುವ ಕಸಿ,ಸಸಿಗಳ ಲಭ್ಯತೆ ಕುರಿತು ಇಲಾಖೆ ಪ್ರಕಟಿಸಿದ ಕರಪತ್ರವನ್ನು ಬಿಡುಗಡೆಗೊಳಿಸಿದ ಜಿಪಂನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ ಎಸ್.ಕೋಟ್ಯಾನ್ ಮಾತನಾಡಿ, ಬಡಜನರ ಆಹಾರವಾಗಿದ್ದ ಹಲಸಿನ ಉಪಯುಕ್ತತೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಸರ್ವೋತ್ತಮ ಉಡುಪ, ಕೃಷಿಕ ಸಮಾಜದ ಕಾರ್ಯದರ್ಶಿ ಪ್ರದೀಪ್ ಹೆಬ್ಬಾರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್ ಉಪಸ್ಥಿತರಿದ್ದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಭುವನೇಶ್ವರಿ ಅತಿಥಿಗಳನ್ನು ಸ್ವಾಗತಿಸಿದರೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ ಬಿ.ವಿ. ವಂದಿಸಿದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.








