ಉದ್ಯೋಗಕ್ಕೆ ತೆರಳಿದ ಯುವತಿ ನಾಪತ್ತೆ: ದೂರು
ಬೆಳ್ತಂಗಡಿ: ಮಂಗಳೂರಿಗೆ ಉದ್ಯೋಗಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿಯ ನಿಟ್ಟಡೆ ಗ್ರಾಮದ ಪಂಡಿಜೆ ನಿವಾಸಿ ನಾಗೇಶ್ ಎಂ.ಕೆ. ಅವರ ಪುತ್ರಿ ಕೀರ್ತನಾ (19) ನಾಪತ್ತೆಯಾದವಳು. ಕಳೆದ ಮೇ 13ರಂದು ಮಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗ ಲಭಿಸಿದೆ ಎಂದು ಮನೆಯಿಂದ ಹೋದವಳು ಬಳಿಕ ಒಂದು ತಿಂಗಳುಗಳ ಕಾಲ ಮನೆಯವರೊಂದಿಗೆ ಸಂಪರ್ಕದಲ್ಲಿದ್ದಳು. ಆ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಮನೆಯವರ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.
ಅಪರಿಚಿತ ಮಹಿಳೆಯೊಬ್ಬರು ನಾಗೇಶ್ ಅವರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಪುತ್ರಿ ಮದುವೆಯಾಗಿ ಚಿಕ್ಕಮಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಕೀರ್ತನಾ ಗೋಧಿ ಮೈಬಣ್ಣ ಹೊಂದಿದ್ದಾಳೆ. ಕನ್ನಡ, ತುಳು ಬಲ್ಲವಳಾಗಿದ್ದಾಳೆ. ಇವಳ ಮಾಹಿತಿ ದೊರೆತ್ತಲ್ಲಿ ವೇಣೂರು ಪೊಲೀಸ್ ಠಾಣೆ (9480805372), ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು (9480805336) ಅಥವಾ ಕಂಟ್ರೋಲ್ ರೂಂ (0824 2220500, 2440284)ಗೆ ಮಾಹಿತಿ ನೀಡಬಹುದಾಗಿದೆ.