ಪಕ್ಷ ದ್ರೋಹಿಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯ: ದಿನೇಶ್ ಗುಂಡೂರಾವ್
ಬೆಂಗಳೂರು, ಜು.14: ಕಾಂಗ್ರೆಸ್ಗೆ ದ್ರೋಹ ಮಾಡಿರುವ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ಗೆ ಕಾಂಗ್ರೆಸ್ನಿಂದ ಯಾವುದೆ ಅನ್ಯಾಯವಾಗಿಲ್ಲ. ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅಚ್ಚರಿಯಾಗುತ್ತಿದೆ. ಆದರೆ, ಕಾಂಗ್ರೆಸ್ನಿಂದ ಶಾಸಕರಾಗಿ, ಸಚಿವರಾಗಿ ಈಗ ಪಕ್ಷಕ್ಕೆ ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಹದ್ದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಅಪರೇಷನ್ ಕಮಲದ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷ, ಒತ್ತಡ ಹಾಕಿ ರಾಜೀನಾಮೆ ಕೊಡಿಸಿದ್ದಾರೆ. ಬಿಜೆಪಿಯವರ ಈ ನಡೆ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವವನ್ನು ಹಾಳು ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಶಾಸಕರನ್ನು 50, 100ಕೋಟಿ ರೂ.ಕೊಟ್ಟು ಸೆಳೆಯುವಂತಹ ಅಗತ್ಯವಾದರು ಏನಿತ್ತು. ಇಂತವರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಈಗಲೂ ನನಗೆ ಸಮಿಶ್ರ ಸರಕಾರ ಉಳಿಯಲಿದೆ ಎಂಬ ವಿಶ್ವಾಸವಿದೆ. ನಮ್ಮ ಶಾಸಕರು ನಮ್ಮನ್ನು ಕೈಬಿಡುವುದಿಲ್ಲವೆಂಬ ಬಲವಾದ ನಂಬಿಕೆ ಇದೆ. ಆದರೂ ಬಿಜೆಪಿಯ ಅಧಿಕಾರದ ವ್ಯಾಮೋಹ ರಾಜ್ಯದಲ್ಲಿ ಅತಂತ್ರ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಅವರು ಅಪಾಧಿಸಿದರು.