ಜನಪ್ರತಿನಿಧಿಗಳು ಮೌಲ್ಯಾಧಾರಿತ ಸಿದ್ಧಾಂತ ರೂಢಿಸಿಕೊಳ್ಳಬೇಕು: ನ್ಯಾ.ಸಂತೋಷ್ ಹೆಗ್ಡೆ

ಬೆಂಗಳೂರು, ಜು.14: ಜನಪ್ರತಿನಿಧಿಗಳು ಮೌಲ್ಯಾಧಾರಿತ ಸಿದ್ಧಾಂತಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಲಹೆ ನೀಡಿದ್ದಾರೆ.
ರವಿವಾರ ನಗರದ ಪುರಭವನದ ಸಭಾಂಗಣದಲ್ಲಿ ಸಿಟಿಜನ್ಸ್ ಫಾರ್ ಬೆಂಗಳೂರು ಆಯೋಜಿಸಿದ್ದ ಕಾರ್ಪೊರೇಟರ್ ನಂ.1 ನಮ್ಮ ಸಮಿತಿ ಪುರಸ್ಕಾರ ಹಾಗೂ ಕಾರ್ಪೊರೇಟರ್ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರು ಗಮನ ನೀಡಬೇಕೇ ಹೊರತು ಸಮಸ್ಯೆಗಳಿಗೆ ಕಾರಣರಾಗಬಾರದು ಎಂದು ಅಭಿಪ್ರಾಯಪಟ್ಟರು.
ಪಾಲಿಕೆ, ನಗರಸಭೆ ಸೇರಿದಂತೆ ಸ್ಥಳೀಯ ಮಟ್ಟದ ಸಂಸ್ಥೆಗಳು, ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಅತೀ ವೇಗವಾಗಿಯೇ ನಾವು ಅಭಿವೃದ್ಧಿ ಕಾಣಬಹುದು. ಹಾಗಾಗಿ, ಅಧಿಕಾರಿಗಳ ವರ್ಗ ಮತ್ತು ಸರಕಾರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಧ್ಯನತೆ ನೀಡಬೇಕು ಎಂದು ತಿಳಿಸಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ಸಮಸ್ಯೆಗಳ ಬಗ್ಗೆ ಜನ ದೂರು ಹೇಳುವುದು ಸಹಜ. ವಾರ್ಡ್ ಸಮಿತಿ ಚಟುವಟಿಕೆಗಳಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದೇ ಆದರೆ, ನಗರದ ಚಿತ್ರಣವನ್ನೇ ಬದಲಾಯಿಸಬಹುದು. ಅನೇಕ ವಾರ್ಡ್ಗಳಲ್ಲಿ ಈ ಬೆಳವಣಿಗೆಯನ್ನು ಈಗಾಗಲೇ ಗಮನಿಸಿ ಸಿಟಿಜನ್ಸ್ ಫಾರ್ ಬೆಂಗಳೂರು ಈ ಪ್ರಶಸ್ತಿ ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲ ವಾರ್ಡ್ ಸಮಿತಿಗಳು ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಬೇಕು ಎಂಬ ನಿರ್ಣಯವನ್ನು ಬಿಬಿಎಂಪಿ ಕೌನ್ಸಿಲ್ ಕೈಗೊಂಡಿತು. 2018ರ ಅಕ್ಟೋಬರ್ನಲ್ಲಿ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದರು. 2018ರ ಡಿಸೆಂಬರ್ ಬಳಿಕ ನಗರದಲ್ಲಿ ಸುಮಾರು 500 ವಾರ್ಡ್ ಸಭೆಗಳು ನಡೆದಿವೆ ಎನ್ನುವ ಮಾಹಿತಿ ಇದೆ ಎಂದರು.
ಈ ಸಂದರ್ಭದಲ್ಲಿ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಭದ್ರೇಗೌಡ, ಸಿಎಫ್ಬಿಯ ಸಹಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ, ತಾರಾ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖರಿದ್ದರು.
ಆಡಳಿತವನ್ನು ಪಾರದರ್ಶಕವನ್ನಾಗಿಸಲು ಇರುವ ಸಾಧನವೇ ವಾರ್ಡ್ ಸಮಿತಿ. ಪ್ರಜಾಪ್ರಭುತ್ವದ ಆಡಳಿತ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವಲ್ಲಿ ಇವು ಪರಿಣಾಮಕಾರಿ. ವಾರ್ಡ್ ಸಮಿತಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜೆಗಳು ಭಾಗವಹಿಸುವಂತೆ ಆಗಬೇಕು.
- ಗಂಗಾಂಬಿಕೆ, ಬಿಬಿಎಂಪಿ ಮೇಯರ್







