ರಾಜಸ್ಥಾನ: ಕಾನ್ಸ್ಟೆಬಲ್ ಹತ್ಯೆ; ನಾಲ್ಕು ಮಂದಿಯ ಬಂಧನ
ಜೈಪುರ, ಜು. 14: ರಾಜಸಮಂದ್ ಜಿಲ್ಲೆಯ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ನಾಲ್ವರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ನೆರೆಹೊರೆಯ ಎರಡು ಕುಟುಂಬದ ಭೂ ವಿವಾದಕ್ಕೆ ಸಂಬಂಧಿಸಿ ಭೀಮ್ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದ ಹೆಡ್ ಕಾನ್ಸ್ಟೆಬಲ್ ಅಬ್ದುಲ್ ಗನಿ ಹಮೇಲಾ ಕಿ ಬೇರ್ ಗ್ರಾಮಕ್ಕೆ ಶನಿವಾರ ಸಂಜೆ ತೆರಳಿದ್ದರು. ಗನಿ ಅವರು ಬೈಕ್ನಲ್ಲಿ ಪೊಲೀಸ್ ಠಾಣೆಗೆ ಹಿಂದಿರುಗುತ್ತಿದ್ದಾಗ ಐದರಿಂದ ಆರು ಮಂದಿ ಇದ್ದ ಗುಂಪೊಂದು ಅವರನ್ನು ದೊಣ್ಣೆಯಿಂದ ಥಳಿಸಿ ಹತ್ಯೆಗೈದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೈನಾ ದೇವಿ, ಆಕೆಯ ಪುತ್ರ ನಾಗೇಶ್ವರ್ ಹಾಗೂ ಗೆಳೆಯರಾದ ಲಕ್ಷ್ಮಣ್ ಹಾಗೂ ಮುಖೇಶ್ರನ್ನು ಬಂಧಿಸಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜಸಮಂದ್ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ. ಹತ್ಯೆಯಾದ ಗನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ರವಿವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಎಸ್ಪಿ ಭುವನ್ ಭೂಷಣ್ ಹಾಗೂ ಇತರ ಪೊಲೀಸರು ರಾಜಸಮಂದ್ ಪೊಲೀಸ್ ಲೈನ್ನಲ್ಲಿ ಅಬ್ದುಲ್ ಗನಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.