ಕಳವು ಪ್ರಕರಣ: ಇಬ್ಬರ ಬಂಧನ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು, ಜು.15: ಸರಗಳ್ಳತನ ಮತ್ತು ಸುಲಿಗೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೊಮ್ಮನಹಳ್ಳಿಯ ಸಲ್ಮಾನ್ ಖಾನ್(22), ಅರ್ಬಾಝ್ ಖಾನ್(22) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಜು.6ರಂದು ಬೆಳಗ್ಗೆ 7 ಗಂಟೆಗೆ ವೇಣುಗೋಪಾಲ್ ಎಂಬುವವರು ಗ್ಯಾಸ್ ಸಿಲಿಂಡರ್ ವಿತರಿಸಲು ಸಾರಕ್ಕಿ ಮಾರ್ಕೆಟ್ ಹತ್ತಿರದ ವಾಸವಿ ಆಸ್ಪತ್ರೆ ಬಳಿ ಹೋಗುವಾಗ ಆರೋಪಿಗಳಿಬ್ಬರು, ಬೈಕ್ನಲ್ಲಿ ಬಂದು ಏಕಾಏಕಿ ಚಾಕು ತೋರಿಸಿ 37 ಸಾವಿರ ರೂ. ನಗದು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇವರ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದೆ, ಇವರಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 9 ಸಾವಿರ ರೂ.ನಗದು, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.