ಬಿಜೆಪಿಯವರನ್ನು ನಂಬಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅತೃಪ್ತ ಶಾಸಕರಿಗೆ ಸಚಿವ ಡಿಕೆಶಿ ಮನವಿ
"ನಿಮಗಾಗಿ ಎಲ್ಲ ನಾಯಕರು ತ್ಯಾಗ ಮಾಡಲು ಸಿದ್ಧರಿದ್ದಾರೆ"
![ಬಿಜೆಪಿಯವರನ್ನು ನಂಬಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅತೃಪ್ತ ಶಾಸಕರಿಗೆ ಸಚಿವ ಡಿಕೆಶಿ ಮನವಿ ಬಿಜೆಪಿಯವರನ್ನು ನಂಬಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅತೃಪ್ತ ಶಾಸಕರಿಗೆ ಸಚಿವ ಡಿಕೆಶಿ ಮನವಿ](https://www.varthabharati.in/sites/default/files/images/articles/2019/07/16/200765-1563290772.jpg)
ಬೆಂಗಳೂರು, ಜು.16: ಬಿಜೆಪಿಯವರನ್ನು ನಂಬಿಕೊಂಡು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ, ವಾಪಸ್ ಬಂದು ಬಿಡಿ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಮಂಗಳವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ನಡೆದ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಾಪಸ್ ಬಂದು ಸರಕಾರದ ಜೊತೆ ಸಂಧಾನ ಮಾಡಿಕೊಳ್ಳಿ, ನಿಮಗೆ ಏನು ಬೇಕು ಅದನ್ನು ಪಡೆದುಕೊಳ್ಳಿ. ಕಾಂಗ್ರೆಸ್ ಪಕ್ಷ ನೀವು ಕಟ್ಟಿದ ಮನೆ, ಇದನ್ನು ಬಿಟ್ಟು ನೀವು ಬೇರೆ ಕಡೆ ಹೋಗಲು ಯಾಕೆ ಪ್ರಯತ್ನ ಪಡುತ್ತಿದ್ದೀರಾ ಎಂದು ಶಿವಕುಮಾರ್ ಹೇಳಿದರು.
ನಾವೆಲ್ಲರೂ ಅಣ್ಣ-ತಮ್ಮಂದಿರು ಇದ್ದಂತೆ. ನಮ್ಮ ನಡುವೆ ಏನೇ ಸಮಸ್ಯೆಗಳಿದ್ದರೂ ಅದನ್ನು ಕೂತು ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳೊಣ. ನಿಮಗಾಗಿ ಎಲ್ಲ ನಾಯಕರು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್ನಲ್ಲಿ ಇಂದು ಶಾಸಕರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆದಿದೆ. ಸರಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ತೀರ್ಪು ಬರಬಹುದು ಎಂಬುದು ನಮ್ಮ ವಿಶ್ವಾಸ. ನ್ಯಾಯಾಲಯ ಕೊಡುವ ತೀರ್ಪಿಗೆ ತಲೆ ಬಾಗಿ ಗೌರವ ಕೊಡುವ ಕೆಲಸವನ್ನು ಸ್ಪೀಕರ್ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.