ಮಂಜೇಶ್ವರ : ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಮೃತ್ಯು
ಮಂಜೇಶ್ವರ : ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶೇಡಿಕಾವಿನಲ್ಲಿ ಬುಧವಾರ ನಡೆದಿದೆ.
ತಂತಿ ಕೈಯ್ಯಲ್ಲಿ ಹಿಡಿದಿರುವ ಸ್ಥಿತಿಯಲ್ಲಿ ಬಿದ್ದಿದ್ದ ಮೃತದೇಹವನ್ನು ಸಂಬಂಧಿಕರು ಬುಧವಾರ ಬೆಳಿಗ್ಗೆ ಮನೆಯ ಹಿತ್ತಲಲ್ಲಿ ಪತ್ತೆ ಹಚ್ಚಿದರು.
ಶೇಡಿಕಾವು ನಿವಾಸಿ ದಿ.ರಾಧಾಕೃಷ್ಣ ಮಯ್ಯ ಎಂಬವರ ಪತ್ನಿ ಕಲಾವತಿ (52)ಮೃತರು. ಇವರು ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯ ಅಲ್ಪ ದೂರದ ಹಿತ್ತಲಲ್ಲಿ ಕಟ್ಟಿಗೆ ಸಂಗ್ರಹಿಸಲಾಗಿದ್ದು, ಅದರಿಂದ ಕಟ್ಟಿಗೆ ತೆಗೆಯುವ ಸಂದರ್ಭ ದುರಂತ ನಡೆದಿರಬೇಕೆಂದು ಶಂಕಿಸಲಾಗಿದೆ.
ಮಂಗಳವಾರ ಸಂಜೆ ಮಕ್ಕಳು, ಸಂಬಂಧಿಕರು ಇವರನ್ನು ಫೋನ್ ಮೂಲಕ ಸಂಪರ್ಕಿಸಲೆತ್ನಿಸಿದ್ದರೂ ಫೋನ್ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸಂಬಂಧಿಕರು ಹುಡುಕಾಡಿದಾಗ ವಿದ್ಯುತ್ ತಂತಿ ಕೈಯಲ್ಲಿ ಹಿಡಿದು ಮೃತರಾಗಿರುವ ಸ್ಥಿತಿಯಲ್ಲಿ ಕಂಡು ಬಂದರು. ಬಳಿಕ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರು ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story