ಮಾಯಾವತಿ ಸಹೋದರನ ಒಡೆತನದ 400 ಕೋಟಿ ರೂಪಾಯಿ ಮೌಲ್ಯದ ಭೂಮಿ ಮುಟ್ಟುಗೋಲು
ಹೊಸದಿಲ್ಲಿ, ಜು. 18: ಬಿಎಸ್ಪಿ ವರಿಷ್ಠೆ ಮಾಯಾವತಿ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ ನೋಯ್ಡಾದಲ್ಲಿರುವ 400 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಭೂಮಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟಗೋಲು ಹಾಕಿಕೊಂಡಿದೆ.
ಆನಂದ್ ಕುಮಾರ್ ಹಾಗೂ ಅವರ ಪತ್ನಿ ವಿಚಿತರ್ ಲತಾ ಅವರು ಒಡೆತನದ 7 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ದಿಲ್ಲಿ ಮೂಲದ ಬೇನಾಮಿ ನಿಷೇಧ ಘಟಕ (ಬಿಪಿಯು) ಇಲಾಖೆ ಜುಲೈ 16ರಂದು ಔಪಚಾರಿಕ ಆದೇಶ ಜಾರಿ ಮಾಡಿದೆ. ಮಾಯಾವತಿ ಅವರು ಇತ್ತೀಚೆಗೆ ಕುಮಾರ್ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಇಲಾಖೆ ಮುಟ್ಟುಗೋಲು ಹಾಕಿಕೊಂಡ ಕುಮಾರ್ ಹಾಗೂ ಅವರ ಪತ್ನಿ ಒಡೆತನದ ಈ ಬೇನಾಮಿ ಎಂದು ಪರಿಗಣಿಸಲಾದ ಆಸ್ತಿ 7 ಎಕರೆ ಎಂದು ಆದೇಶದಲ್ಲಿ ಹೇಳಲಾಗಿದೆ. ಈ ಆಸ್ತಿಯ ಒಟ್ಟು ಮೌಲ್ಯ 400 ಕೋಟಿ ರೂಪಾಯಿ. ಬೇನಾಮಿ ಕಾಯ್ದೆ ಉಲ್ಲಂಘಿಸಿದವರಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ. 25ನ್ನು ದಂಡವಾಗಿ ಪಾವತಿಸಲು ಬಾಧ್ಯಸ್ತರಾಗಿರುತ್ತಾರೆ ಎಂದು ಆದೇಶ ಹೇಳಿದೆ.