ಐಎಂಎ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ರೋಷನ್ ಬೇಗ್
ಬೆಂಗಳೂರು, ಜು.19: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಟ್(ಎಸ್ಐಟಿ) ವಿಚಾರಣೆಗೆ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ಶುಕ್ರವಾರ ಹಾಜರಾದರು.
ಶುಕ್ರವಾರ ಬೆಳಗ್ಗೆ ಸಿಟ್(ಎಸ್ಐಟಿ) ಕಚೇರಿಗೆ ತೆರಳಿದ ರೋಷನ್ ಬೇಗ್ ಅವರು, ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ, ದಾಖಲೆ ಪತ್ರಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.
ಕೆಲ ಗಂಟೆಗಳ ಬಳಿಕ ಅವರು, ಕಚೇರಿಯಿಂದ ತೆರಳಿದರು. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ, ಪುನಃ ವಿಚಾರಣೆಗೆ ಹಾಜರಾಗಬೇಕು ಎಂದು ಸಿಟ್ ಅಧಿಕಾರಿಗಳು ರೋಷನ್ ಬೇಗ್ ಅವರಿಗೆ ಸೂಚಿಸಿರುವುದಾಗಿ ಹೇಳಲಾಗುತ್ತಿದೆ.
ಜು.15ರಂದು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪುಣೆಗೆ ಹೊರಟಿದ್ದ ರೋಷನ್ ಬೇಗ್ರನ್ನು ಬೇರೆ ಕಡೆ ಹೋಗಬಾರೆನ್ನುವ ಕಾರಣಕ್ಕೆ ವಶಕ್ಕೆ ಪಡೆದಿದ್ದ ಸಿಟ್ ತನಿಖಾಧಿಕಾರಿಗಳು, ತೀವ್ರ ವಿಚಾರಣೆ ನಡೆಸಿ ಜು.19ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು, ವಿಚಾರಣೆಗೆ ಹಾಜರಾದರು.