ಸಿಧು ರಾಜೀನಾಮೆ ಸ್ವೀಕರಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್
ಮುಂಬೈ, ಜು.20: ನವಜೋತ್ ಸಿಂಗ್ ಸಿಧು ತನ್ನ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ವೀಕರಿಸಿದ್ದು, ರಾಜ್ಯ ರಾಜಪಾಲ ವಿಜಯೆಂದರ್ ಪಾಲ್ ಸಿಂಗ್ ಬದ್ನೊರ್ ಅವರಿಗೆ ಕಳುಹಿಸಿದ್ದಾರೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿಂಗ್, “ನನಗೆ ಸಿಧು ಜೊತೆ ಯಾವ ಸಮಸ್ಯೆಯೂ ಇಲ್ಲ. ಅಷ್ಟಕ್ಕೂ ಸಂಪುಟ ಪುನರ್ರಚನೆಯ ವೇಳೆ ನಾನು ಅವರಿಗೆ ಬಹುಮುಖ್ಯ ಹುದ್ದೆಯನ್ನೇ ನೀಡಿದ್ದೆ. ಸಂಪುಟ ತೊರೆಯುವುದು ಅವರ ನಿರ್ಧಾರವಾಗಿದೆ. ನನ್ನ ಕಚೇರಿಗೆ ಅವರು ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎಂದು ನನಗೆ ಮಾಹಿತಿ ದೊರೆಯಿತು. ಅದನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ಸಂಪುಟ ಸಭೆಯಲ್ಲಿ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಸಿಧು ಸಭೆಯ ಅರ್ಧದಲ್ಲೇ ಎದ್ದು ಹೊರ ನಡೆದ ಕಾರಣ ಅವರಿಗೆ ನೀಡಲಾಗಿದ್ದ ಸ್ಥಳೀಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವಾಲಯದ ಹೊಣೆಯನ್ನು ಅವರಿಂದ ಕಿತ್ತುಕೊಳ್ಳಲಾಗಿತ್ತು. ನಂತರ ಸಂಪುಟ ಪುನರ್ರಚನೆ ಸಮಯದಲ್ಲಿ ಅವರಿಗೆ ವಿದ್ಯುತ್ ಮತ್ತು ಇಂಧನ ಸಚಿವ ಸ್ಥಾನವನ್ನು ನೀಡಲಾಗಿತ್ತು. ಆದರೆ ಸಿಧು ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು ಮತ್ತು ಸದನದಿಂದ ದೂರವುಳಿದಿದ್ದರು.