ಮೂಡುಬಿದಿರೆ: ಪೋಷಕರು ಮತ್ತು ಶಿಕ್ಷಕರ ಸಭೆ
ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಜೀವನ ಅತ್ಯಂತ ಅಮೂಲ್ಯವಾದುದು. ಹೆತ್ತವರು ತಮ್ಮ ಮಕ್ಕಳನ್ನು ಕಾಲೇಜು ಮತ್ತು ಹಾಸ್ಟೆಲ್ಗಳಿಗೆ ಸೇರಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸಂಸ್ಥೆ ಹಾಗೂ ಅಲ್ಲಿನ ಉಪನ್ಯಾಸಕರು ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸುವಂತೆ ಹೆತ್ತವರು ಕೂಡಾ ತಮ್ಮ ಮಕ್ಕಳ ಚಲನವಲನಗಳನ್ನು ಸದಾ ಗಮನಿಸುತ್ತಿರಬೇಕೆಂದು ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಗೋಪಾಲ ಸಲಹೆ ನೀಡಿದರು.
ಅವರು ಮಿಜಾರು ಹೋಮಿಯೋಪಥಿಕ್ ಕಾಲೇಜಿನ ವತಿಯಿಂದ ಶನಿವಾರ ಸೇಮಿನಾರ್ ಹಾಲ್ನಲ್ಲಿ ನಡೆದ ಪೋಷಕರು ಮತ್ತು ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆತ್ತವರ ಬಳಿ ಸುಳ್ಳು ಹೇಳಿ ಹಣ ಪಡೆದುಕೊಂಡು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಈ ಬಗ್ಗೆ ಹೆತ್ತವರು ಜಾಗೃತರಾಗಬೇಕೆಂದು ಹೇಳಿದ ಅವರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗದೆ ಉತ್ತಮ ಜೀವನವನ್ನು ನಡೆಸಬೇಕು ಮತ್ತು ರಸ್ತೆ ನಿಯಮಗಳನ್ನು ಸದಾ ಪಾಲಿಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ರಾಜ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಏಳಿಗೆಯಲ್ಲಿ ಹೆತ್ತವರ ಪಾತ್ರವೂ ಪ್ರಮುಖವಾದುದು. ಹೋಮಿಯೋಪಥಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಿಸರ್ಚ್ ಚಟುವಟಿಕೆಗಳಿಗೆ ಅನುದಾನ ಸಿಕ್ಕಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಹೋಮಿಯೋಪಥಿಕ್ ಕಾಲೇಜಿನ ಆಡಳಿತಾಧಿಕಾರಿ ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ರೋಶನ್ ಪಿಂಟೋ ಸ್ವಾಗತಿಸಿದರು. ಹೆತ್ತವರ ಪರವಾಗಿ ಡಾ.ಗುರುಪ್ರಸಾದ್ ಮತ್ತು ಕಣ್ಣನ್ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುರಾಗ್ ವಿದ್ಯಾರ್ಥಿಗಳ ಪರವಾಗಿ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಪ್ರಜ್ಞಾ ದೇವಾಡಿಗ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಸದಸ್ಯ ಶ್ರೀದೇಶ್ ವಂದಿಸಿದರು. ವಿದ್ಯಾರ್ಥಿನಿ ಗ್ರೇಸ್ ಕಾರ್ಯಕ್ರಮ ನಿರೂಪಿಸಿದರು.