ಭಟ್ಕಳ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥ
ಭಟ್ಕಳ: ರವಿವಾರ ಬೆಳಿಗ್ಗೆಯಿಂದ ಭಟ್ಕಳ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯೆಸ್ಥಗೊಂಡಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಮನೆಗಳ ಒಳಗೂ ನೀರು ನುಗ್ಗತೊಡಗಿದೆ.
ನಗರದ ಹೃದಯಭಾಗವಾಗಿರುವ ಶಮ್ಸುದ್ದೀನ್ ವೃತ್ತದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹನಿಫಾಬಾದ್ ಪ್ರದೇಶದ ರಹ್ಮತಾಬಾದ್ ಮೊಹಲ್ಲಾದಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಶಾಲಾವಾಹನವೊಂದು ಸಿಲುಕಿಕೊಂಡ ಪರಿಣಾಮ ಕೆಲ ಹೊತ್ತು ರಸ್ತೆ ತಡೆಯುಂಟಾದ ಘಟನೆಯೂ ವರದಿಯಾಗಿದೆ.
ಅಲ್ಲದೆ ರಸ್ತೆಯ ಪಕ್ಕದಲ್ಲಿ ನಿರ್ಮಿಸಿದ ಚರಂಡಿ ಮಳೆನೀರಿನಿಂದ ತುಂಬಿಕೊಂಡಿದ್ದು, ಕೆಲವರು ಚರಂಡಿಗೆ ಜಾರಿ ಬಿದ್ದು ಆಸ್ಪತ್ರೆಗೆ ಸೇರಿರುವ ಘಟನೆಯೂ ವರದಿಯಾಗಿದೆ.