ತನ್ನ ಏಕೈಕ ಆಸ್ತಿಯಾಗಿದ್ದ ವಾಚನ್ನು ಕದ್ದವರಿಗೂ ಔದಾರ್ಯ ತೋರಿದ್ದ 3 ಬಾರಿಯ ಸಂಸದ ಎ.ಕೆ.ರಾಯ್ !
ದೇಶ ಕಂಡ ಅತ್ಯಂತ ಸರಳ ರಾಜಕಾರಣಿಯ ಬಗ್ಗೆ ತಿಳಿದುಕೊಳ್ಳಿ…

ಹೊಸದಿಲ್ಲಿ, ಜು.21: ಇಂದು ನಿಧನರಾಗಿರುವ ಮೂರು ಬಾರಿಯ ಸಂಸದ ಅರುಣ್ ಕುಮಾರ್ ರಾಯ್ ಅಥವಾ ಎಕೆ ರಾಯ್ ದೇಶ ಕಂಡ ಅತ್ಯಂತ ಸರಳ ರಾಜಕಾರಣಿಗಳಲ್ಲೊಬ್ಬರು ಎಂದರೆ ತಪ್ಪಾಗಲಾರದು. ಅಧಿಕಾರ, ಸ್ಥಾನ, ಹಣದ ಹಿಂದೆ ಬಿದ್ದು ಕರ್ತವ್ಯವನ್ನು ಮರೆಯುತ್ತಿರುವ ಇಂದಿನ ರಾಜಕಾರಣಿಗಳು ಎ.ಕೆ. ರಾಯ್ ಅವರ ಜೀವನವನ್ನೊಮ್ಮೆ ಗಮನಿಸಬೇಕಿದೆ ಮತ್ತು ತಾವು ರಾಜಕಾರಣಿಗಳಾಗಿ ಹೇಗಿರಬೇಕು ಎನ್ನುವುದನ್ನು ಕಲಿಯಬೇಕಾಗಿದೆ.
1977, 1980 ಮತ್ತು 1989ರಲ್ಲಿ ಧನ್ಬದ್ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸಿ ಮೂರು ಬಾರಿ ಜಯ ಗಳಿಸಿದ್ದರೂ ಎ.ಕೆ.ರಾಯ್ ಅವರ ಬಳಿ ಇದ್ದ ಏಕೈಕ ಆಸ್ತಿಯೆಂದರೆ ಎಚ್ ಎಂಟಿ ವಾಚ್ ಮಾತ್ರ. ಆದರೆ ನಂತರ ಅದೂ ಕೂಡ ಕಳವಾಗಿತ್ತು!.
ಧನ್ಬದ್ ನ ಸುಡಾಮ್ದಿ ಪೊಲೀಸ್ ಠಾಣೆ ವ್ಯಾಪ್ತಿಯ ನೂನ್ ದಿಹ್ ಗ್ರಾಮದಲ್ಲಿರುವ ಎ.ಕೆ. ರಾಯ್ ಮನೆಗೆ ನುಗ್ಗಿದ್ದ ಕಳ್ಳರು ಅವರು ತನ್ನ 6 ದಶಕಗಳ ರಾಜಕೀಯ ಜೀವನದಲ್ಲಿ ಉಡುಗೊರೆಯಾಗಿ ಸ್ವೀಕರಿಸಿದ್ದ ಏಕೈಕ ವಾಚ್ ಅನ್ನು ಕದ್ದೊಯ್ದರು. ಆ ಸಮಯದಲ್ಲಾಗಲೇ ರಾಯ್ ದಿವಾಳಿಯಾಗಿದ್ದರು. ಈ ಘಟನೆ 2014ರ ಜನವರಿಯಲ್ಲಿ ನಡೆದಿತ್ತು. ಇಷ್ಟೇ ಅಲ್ಲದೆ ಕಳ್ಳರು ಅವರ ಉಳಿತಾಯ 2,600 ರೂ.ಗಳನ್ನೂ ಒಯ್ದಿದ್ದರು.
ಆದರೆ ಈ ಘಟನೆಗಾಗಿ ರಾಯ್ ಕಳ್ಳರನ್ನು ದೂಷಿಸಲಿಲ್ಲ ಮಾತ್ರವಲ್ಲ, ಪೊಲೀಸ್ ದೂರು ಕೂಡ ನೀಡಲಿಲ್ಲ. ಕಳ್ಳರ ಬಗ್ಗೆ ಅವರ ಹೇಳಿದ್ದಿಷ್ಟೇ.."ನನಗಿಂತಲೂ ಅವರಿಗೆ ಅದರ ಅವಶ್ಯಕತೆ ಹೆಚ್ಚಿರಬಹುದು”.
ಅವಿವಾಹಿತರಾಗಿದ್ದ ರಾಯ್ ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ವಾಸವಿದ್ದರು. ಇಂದು ಭ್ರಷ್ಟಾಚಾರವು ರಾಷ್ಟ್ರೀಯ ಸಮಸ್ಯೆಯಾಗಿರುವಾಗ ರಾಯ್ ತನ್ನ ರಾಜಕೀಯ ಜೀವನದುದ್ದಕ್ಕೂ ಪ್ರಾಮಾಣಿಕರಾಗಿ ಮತ್ತು ಸರಳ ರಾಜಕಾರಣಿಯಾಗಿ ಉಳಿದರು. ಮಾಜಿ ಸಂಸದರಾಗಿ ತಮಗೆ ಸಿಗುತ್ತಿದ್ದ ಪಿಂಚಣಿಯನ್ನೂ ಪಡೆದುಕೊಳ್ಳದ ಅವರು ಆ ಎಲ್ಲಾ ಮೊತ್ತವನ್ನು ರಾಷ್ಟ್ರಪತಿ ಪರಿಹಾರ ನಿಧಿಗೆ ನೀಡಿದ್ದರು.
ಭ್ರಷ್ಟಾಚಾರ, ದುರಾಸೆ, ಅಧಿಕಾರದ ಮೋಹಗಳೇ ಮೇಳೈಸುತ್ತಿರುವ ರಾಜಕೀಯ ರಂಗದಲ್ಲಿ ಎ.ಕೆ. ರಾಯ್ ಎಂದಿಗೂ ವಿಭಿನ್ನವಾಗಿ ನಿಲ್ಲುತ್ತಾರೆ.