ಚಿಕ್ಕಮಗಳೂರು ಜಿಲ್ಲಾದ್ಯಂತ ಸಾಧಾರಣ ಮಳೆ: ಭತ್ತದ ಕೃಷಿ ಚಟುವಟಿಕೆ ಬಿರುಸು
ಚಿಕ್ಕಮಗಳೂರು, ಜು.22: ಕಳೆದ ಕೆಲ ದಿನಗಳಿಂದ ಭತ್ತದ ಕೃಷಿಕರೊಂದಿಗೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮಳೆ ರವಿವಾರ ಸಂಜೆಯಿಂದ ಜಿಲ್ಲಾದ್ಯಂತ ಬಿರುಸುಗೊಂಡಿದ್ದು, ಸೋಮವಾರ ಬೆಳಗಿನಿಂದಲೇ ನಗರ ಸೇರಿದಂತೆ ಮಲೆನಾಡಿನಾದ್ಯಂತ ಉತ್ತಮ ಮಳೆಯಾಗಿದೆ.
ಕಳೆದ ಎರಡು ವಾರಗಳ ಹಿಂದೆ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿದಿದ್ದ ಮಳೆ ನಂತರದ ದಿನಗಳಲ್ಲಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣವಾಗಿ ಸುರಿದಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಜಿಲ್ಲೆಯಾದ್ಯಂತ ಭತ್ತದ ಕೃಷಿಕರು ಭತ್ತದ ಗದ್ದೆಗಳನ್ನು ಹೂಟೆ ಮಾಡಲಾರಂಭಿಸಿದ್ದು, ಸಸಿಮಡಿಗಳನ್ನು ಸಿದ್ಧಗೊಳಿಸಿದ್ದರು. ಆದರೆ ಮಳೆಯ ಕಣ್ಣಾಮುಚ್ಚಾಲೆ ರೈತರಿಗೆ ನಿರಾಶೆಯನ್ನುಂಟು ಮಾಡಿತ್ತು.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಬಯಲುಸೀಮೆ ಪ್ರದೇಶವಾದ ತರೀಕೆರೆ ತಾಲೂಕುಗಳು ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುವ ತಾಲೂಕುಗಳಾಗಿವೆ. ಉತ್ತಮ ಮಳೆಯಾಗಿದ್ದಲ್ಲಿ ಈ ಹೊತ್ತಿಗಾಗಲೇ ಭತ್ತದ ನಾಟಿ ಕೆಲಸ ಆರಂಭವಾಗಬೇಕಿತ್ತು. ಆದರೆ ಭತ್ತದ ಕೃಷಿಕರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ರವಿವಾರದಿಂದ ಜಿಲ್ಲಾದ್ಯಂತ ಮಳೆ ಧಾರಾಕಾರವಾಗಿ ಸುರಿಯದಿದ್ದರೂ ಸಾಧಾರಣವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತದ ಕೃಷಿಕರು ಮತ್ತೆ ಭತ್ತದ ಗದ್ದೆಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಿಳಿದಿದ್ದಾರೆ. ಅರ್ಧಕ್ಕೆ ನಿಲ್ಲಿಸಿದ್ದ ಭತ್ತದ ಹೂಟೆ ಕೆಲಸಕ್ಕೆ ಚಾಲನೆ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಸೋಮವಾರ ಮುಂಜಾನೆಯಿಂದ ಜಿಲ್ಲಾದ್ಯಂತ ಸುರಿದ ಸಾಧಾರಣ ಮಳೆಯಿಂದಾಗಿ ಭತ್ತದ ಕೃಷಿಕರಲ್ಲಿ ಉತ್ತಮ ಮಳೆಯ ನಿರೀಕ್ಷೆಯನ್ನು ಜೀವಂತವಾಗಿರಿಸಿದೆ. ಗದ್ದೆಗಳ ಹೂಟೆ ಕೆಲಸವನ್ನು ಪೂರ್ಣಗೊಳಿಸಿರುವ ರೈತರು ಭತ್ತದ ನಾಟಿ ಕೆಲಸಕ್ಕೆ ಸಿದ್ಧತೆ ನಡೆಸಿದ್ದಾರೆ.
ಮಲೆನಾಡಿನ ಶೃಂಗೇರಿ, ಮೂಡಿಗೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲವೆಡೆ ಈಗಾಗಲೇ ನಾಟಿ ಕೆಲಸ ಆರಂಭವಾಗಿದ್ದು, ತರೀಕೆರೆ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಭತ್ತದ ಸಸಿ ಕೀಳುವ ಕೆಲಸ ಆರಂಭವಾಗಿದೆ. ಸದ್ಯ ಸುರಿಯುತ್ತಿರುವ ಮಳೆ ನಿರಂತರವಾಗಿ ಸುರಿದಲ್ಲಿ ಭತ್ತದ ಸಸಿ ನಾಟಿ ಕೆಲಸ ಎಲ್ಲೆಡೆ ಬಿರುಸುಗೊಳ್ಳಲಿದೆ.
ಚಿಕ್ಕಮಗಳೂರು ಜಿಲ್ಲೆ ಕಾಫಿಗೆ ಹೆಸರಾಗಿರುವಂತೆ ಭತ್ತದ ಕೃಷಿಗೂ ಈ ಹಿಂದೆ ಹೆಸರಾಗಿತ್ತು. ಆದರೆ ಕಾಫಿ, ಅಡಿಕೆಗೆ ಬೇಡಿಕೆಗ ಹೆಚ್ಚಾದಾಗಿನಿಂದ ಮಲೆನಾಡಿನ ಸಾಂಪ್ರದಾಯಿಕ ಭತ್ತದ ಕೃಷಿಕರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಭತ್ತದ ಗದ್ದೆಗಳು ಕಾಫಿ, ಅಡಿಕೆ ತೋಟಗಳಾಗಿ ಮಾರ್ಪಾಡುಗೊಂಡಿವೆ. ಭತ್ತದ ಕೃಷಿಕರು ವಾಣಿಜ್ಯ ಬೆಳೆಗಳತ್ತ ಮುಖಮಾಡಲು ಹವಾಮಾನ ವೈಪರೀತ್ಯ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಕಳೆದ ಕೆಲ ದಶಕಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಈ ಬಾರಿಯಂತೂ ವಾಡಿಕೆ ಮಳೆಯ ಅರ್ಧದಷ್ಟು ಮಳೆಯಾಗದಿರುವುದು ರೈತರನ್ನು ಕಂಗೆಡಿಸಿದೆ. ಈ ಹವಾಮಾನ್ಯ ವೈಪರೀತ್ಯ ಮುಂದುವರಿದಲ್ಲಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿ ಕಣ್ಮರೆಯಾಗುವ ದಿನ ದೂರವಿಲ್ಲ ಎಂಬುದು ಈ ಭಾಗದ ಕೃಷಿಕರ ಅಭಿಪ್ರಾಯವಾಗಿದೆ.