ಸಮವಸ್ತ್ರ ವಿತರಿಸಲು ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
![ಸಮವಸ್ತ್ರ ವಿತರಿಸಲು ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಸಮವಸ್ತ್ರ ವಿತರಿಸಲು ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ](https://www.varthabharati.in/sites/default/files/images/articles/2019/07/22/201758-1563813778.jpeg)
ಬೆಂಗಳೂರು, ಜು.22: ಸರಕಾರಿ ಶಾಲೆ ಹಾಗೂ ಆರ್ಟಿಇ ಕಾಯ್ದೆಯಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಬದಲು ಸಿದ್ಧ ಪಡಿಸಿದ ಸಮವಸ್ತ್ರ ನೀಡಲು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಜು.25ರಂದು ಆದೇಶ ನೀಡುವುದಾಗಿ ಹೇಳಿದೆ. ಈ ಕುರಿತು ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಅನುಚ್ಛೇದ-21(ಎ) ಪ್ರಕಾರ 6 ರಿಂದ 14ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕಾಗಿದೆ. ಆದರೆ, ಸರಕಾರ ಒಬ್ಬ ವಿದ್ಯಾರ್ಥಿಗೆ ಒಂದು ಜೊತೆ ಸಿದ್ಧ ಉಡುಪು ಕೊಡುತ್ತದೆ. ಮತ್ತೊಂದನ್ನು ಸಿದ್ಧ ಉಡುಪು ಕೊಡದೆ ಬರೀ ಸಮವಸ್ತ್ರವನ್ನು ನೀಡುತ್ತದೆ. ಹೀಗಾಗಿ, ಮತ್ತೊಂದು ಜೊತೆ ಸಮವಸ್ತ್ರವನ್ನು ಸಿದ್ಧ ಉಡುಪು ಮಾಡಿ ಕೊಡಲು ನಿರ್ದೇಶಿಸಬೇಕೆಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಜು.25ರಂದು ಆದೇಶ ನೀಡುವುದಾಗಿ ಹೇಳಿತು.