ಪುಷ್ಪಗಿರಿ ಬೆಟ್ಟ ತಪ್ಪಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ: ನಕ್ಸಲರ ಬಗ್ಗೆ ನಿಗಾ
![ಪುಷ್ಪಗಿರಿ ಬೆಟ್ಟ ತಪ್ಪಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ: ನಕ್ಸಲರ ಬಗ್ಗೆ ನಿಗಾ ಪುಷ್ಪಗಿರಿ ಬೆಟ್ಟ ತಪ್ಪಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ: ನಕ್ಸಲರ ಬಗ್ಗೆ ನಿಗಾ](https://www.varthabharati.in/sites/default/files/images/articles/2019/07/22/201765-1563814193.jpg)
ಸಾಂದರ್ಭಿಕ ಚಿತ್ರ
ಮಡಿಕೇರಿ, ಜು.22: ನಕ್ಸಲ್ ನಿಗ್ರಹ ದಳ ಮತ್ತು ಕೊಡಗು ಜಿಲ್ಲಾ ಪೊಲೀಸರು ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಪುಷ್ಪಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ನಕ್ಸಲ್ ಸುಳಿವಿನ ಬಗ್ಗೆ ನಿಗಾ ವಹಿಸಿದರು. ವರ್ಷದಲ್ಲಿ ಎರಡು, ಮೂರು ಬಾರಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವುದು ವಾಡಿಕೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ, ಎಸ್ಪಿ ಕೂಡ ಇದನ್ನು ಖಾತ್ರಿ ಪಡಿಸಿದ್ದಾರೆ.
ಮಳೆ ತೀವ್ರತೆಯನ್ನು ಪಡೆದುಕೊಂಡಿರುವುದರಿಂದ ಅತಿ ಹೆಚ್ಚು ಮಳೆಯಾಗುವ ಪುಷ್ಪಗಿರಿ ವ್ಯಾಪ್ತಿಯಲ್ಲಿ ಆಹಾರದ ಕೊರತೆ ಎದುರಾಗುವುದರಿಂದ ನಕ್ಸಲರು ಅಕ್ಕಪಕ್ಕದ ಗ್ರಾಮಗಳಲ್ಲಿ ಆಹಾರದ ಹುಡುಕಾಟ ನಡೆಸಬಹುದು ಎನ್ನುವ ಕಾರಣಕ್ಕಾಗಿ ಕೂಂಬಿಂಗ್ ನಡೆಸಲಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಜು.23 ರಂದು ಮಡಿಕೇರಿ ಕೋರ್ಟ್ನಲ್ಲಿ ನಕ್ಸಲ್ ಮುಖಂಡ ರೂಪೇಶ್ನ ವಿಚಾರಣೆ ನಡೆಯುವುದರಿಂದ ಆತನನ್ನು ಕೇರಳದಿಂದ ಮಡಿಕೇರಿಗೆ ಕರೆ ತರಲಾಗುವುದು. ಈ ಹಿನ್ನೆಲೆಯಲ್ಲೂ ನಿಗಾ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.