ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ಡಿ.ಕೆ.ಶಿವಕುಮಾರ್
![ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ಡಿ.ಕೆ.ಶಿವಕುಮಾರ್ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ಡಿ.ಕೆ.ಶಿವಕುಮಾರ್](https://www.varthabharati.in/sites/default/files/images/articles/2019/07/23/201908-1563900962.jpg)
ಬೆಂಗಳೂರು, ಜು. 23: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ದಿನವೇ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಡಿ.ಕೆ.ಶಿವಕುಮಾರ್ ಬೆಂಬಲ’ ಎಂಬ ಹೇಳಿಕೆ ನೀಡಿದ್ದು, ಅವರ ವಿರುದ್ಧ 2 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ನೊಂದುಕೊಂಡಿರಲಿಲ್ಲ. ಯತ್ನಾಳ್ ಹೇಳಿಕೆಯಿಂದ ನನಗೆ ಅತೀವ ನೋವಾಗಿದೆ. ಬೇನಾಮಿ ಆಸ್ತಿ ಪ್ರಕರಣ ಸಂಬಂಧ ನಾನು ಹಲವು ಸಂಕಷ್ಟ ಎದುರಿಸುತ್ತಿದ್ದೇನೆ ಎಂದು ಹೇಳಿದರು.
ಪದೇ ಪದೇ ಬಿಜೆಪಿ ಮುಖಂಡರು ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಲಿದ್ದಾರೆ, ಜೈಲಿಗೆ ಹೋಗಲಿದ್ದಾರೆಂದು ಹೇಳುತ್ತಲೇ ನನ್ನನ್ನು ಜೈಲಿಗೆ ಕಳುಹಿಸುವ ತಂತ್ರ ಹೆಣೆದಿದ್ದಾರೆ. ಆದರೆ, ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಕಾರಾಗೃಹ ಮಂತ್ರಿಯಾಗಿದ್ದೆ. ಇನ್ನು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದರು.
ಪ್ರಧಾನಿ, ಮುಖ್ಯಮಂತ್ರಿ ಸೇರಿ ಹಲವರ ಜತೆ ನಾನು ಸಂಘರ್ಷ ಮಾಡಿದ್ದೇನೆ. ಸ್ವಾಭಿಮಾನಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದ ಅವರು, ಯಾವುದೇ ಕಾರಣಕ್ಕೂ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡಿರುವ ಶಾಸಕರ ಪಲ್ಲಕ್ಕಿ ಹೊತ್ತಿದ್ದು, ಇದೀಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿದೆ ಎಂದು ಲೇವಡಿ ಮಾಡಿದರು.
ರಣರಂಗದಲ್ಲೆ ಭೇಟಿ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರಿಗೆ ತಿಳಿಸಿದ್ದೇನೆ. ಇನ್ನು ನಮ್ಮ-ನಿಮ್ಮ ಭೇಟಿ ರಣರಂಗದಲ್ಲೆ ಅಂತ ಹೇಳಿದ್ದೇನೆ. ಚುನಾವಣೆಯ ಮೂಲಕವೇ ಅವರಿಗೆ ಉತ್ತರ ನೀಡುತ್ತೇನೆ’
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ