ಬ್ರಾಹ್ಮಣ ಗುಣವುಳ್ಳ ವ್ಯಕ್ತಿ ಆಡಳಿತ ಚುಕ್ಕಾಣಿ ಹಿಡಿಯಬೇಕು: ಕೇರಳ ಹೈಕೋರ್ಟ್ ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆ

ತಿರುವನಂತಪುರ,ಜು.23; ಬ್ರಾಹ್ಮಣ ಸಮುದಾಯದ ಗುಣಗಾನ ಮಾಡುವ ಮೂಲಕ ಕೇರಳ ಹೈಕೋರ್ಟ್ ನ್ಯಾಯಾಧೀಶ ವಿ.ಚಿದಂಬರೇಶ್ ವಿವಾದಕ್ಕೆ ಗ್ರಾಸವಾಗಿದ್ದಾರೆ. ಬ್ರಾಹ್ಮಣನ ಗುಣಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಆಡಳಿತ ಚುಕ್ಕಾಣಿ ಹಿಡಿದಿರಬೇಕು ಎಂದು ಅವರು ಹೇಳಿದರು.
ತಿರುವನಂತಪುರದಲ್ಲಿ ಶುಕ್ರವಾರ ನಡೆದ ತಮಿಳು ಬ್ರಾಹ್ಮಣರ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ಬ್ರಾಹ್ಮಣನೆಂದರೆ ದ್ವಿಜನಮಾನ ಅಂದರೆ ಎರಡು ಸಲ ಜನಿಸಿದವನೆಂದು ಅರ್ಥ. ಪೂರ್ವಜನ್ಮದ ಸುಕೃತದಿಂದಾಗಿ ಬ್ರಾಹ್ಮಣ ಜನ್ಮ ಪ್ರಾಪ್ತವಾಗುತ್ತದೆ. ಅವರು ಕೆಲವು ನಿರ್ದಿಷ್ಟವಾದ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಪರಿಶುದ್ಧವಾದ ಹವ್ಯಾಸಗಳು, ಸತ್ಚಿಂತನೆ, ಆಕರ್ಷಕವಾದ ವ್ಯಕ್ತಿತ್ವವುಳ್ಳನಾಗಿರುತ್ತಾನೆ. ಬಹುತೇಕ ಸಸ್ಯಾಹಾರಿಯಾಗಿರುವ ಆತ ಕರ್ನಾಟಕ ಸಂಗೀತ ಪ್ರೇಮಿಯೂ ಆಗಿರುತ್ತಾನೆ. ಓರ್ವ ಬ್ರಾಹ್ಮಣನಲ್ಲಿ ಎಲ್ಲಾ ಉತ್ತಮ ಗುಣಗಳು ಮಿಳಿತಗೊಂಡಿರುತ್ತವೆ’’ ಎಂದವರು ಹೇಳಿದ್ದಾರೆ.
ಬ್ರಾಹ್ಮಣರು ಯಾವತ್ತೂ ಕೋಮುವಾದಿಯಾಗಲಾರ, ಆತ ಸದಾ ಅನುಕಂವುಳ್ಳವನಾಗಿರುತ್ತಾನೆ ಹಾಗೂ ಅಹಿಂಸಾವಾದಿಯಾಗಿರುತ್ತಾನೆ ಎಂದರು. ಬ್ರಾಹ್ಮಣನು ಜನರನ್ನು ಪ್ರೀತಿಸುವವನಾಗಿದ್ದು, ಯಾವುದೇ ಉತ್ತಮವಾದ ಉದ್ದೇಶಗಳಿಗೆ ಆತ ಉದಾರವಾಗಿ ದಾನ ಮಾಡುತ್ತಾನೆ. ಅಂತಹ ವ್ಯಕ್ತಿಯು ಯಾವತ್ತೂ ಆಡಳಿತದ ಚುಕ್ಕಾಣಿ ಹಿಡಿದಿರಬೇಕಾಗಿದೆ. ಈ ಇಟ್ಟಿನಲ್ಲಿ ತಮಿಳು ಬ್ರಾಹ್ಮಣರ ಸಮಾವೇಶವು ಒಂದು ಮಹತ್ವಪೂರ್ಣವಾದುದಾಗಿದೆ’’ ಎಂದರು.
ಚಿತಂಬರೇಶ್ ಅವರು ಜಾತಿ ಆಧಾರಿತ ಮೀಸಲಾತಿಯ ವಿರುದ್ಧ ಪ್ರತಿಕ್ರಿಯಿಸಿದ ವರು, ಮೀಸಲಾತಿಯು ಜಾತಿ ಅಥವಾ ಸಮುದಾಯದ ಆಧಾರದಲ್ಲಿ ಇರಬೇಕೇ ಎಂಬ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ’’ ಎಂದರು.
ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿಯಿದೆಯಾದರೂ, ಬ್ರಾಹ್ಮಣ ಬಾಣಸಿಗನ ಮಗ ಕೆನೆಪದರದೊಳಗೆ ಬಾರದೆ ಇದ್ದಲ್ಲಿ ಆತನಿಗೆ ಮೀಸಲಾತಿ ಇರದು. ಆದರೆ ಇತರ ಹಿಂದುಳಿದ ವರ್ಗ (ಓಬಿಸಿ)ಕ್ಕೆ ಸೇರಿದ ಮರದ ವ್ಯಾಪಾರಿಯ ಮಗ ಕೆನೆಪದರದೊಳಗೆ ಬಾರದೆ ಇದ್ದರೂ ಮೀಸಲಾತಿಗೆ ಅರ್ಹನಾಗುತ್ತಾನೆ’’ ಎಂದು ಅವರು ಹೇಳಿದರು.