ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಗುರುತಿಸಿ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
![ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಗುರುತಿಸಿ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಗುರುತಿಸಿ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ](https://www.varthabharati.in/sites/default/files/images/articles/2019/07/24/202100-1563988409.jpeg)
ಬೆಂಗಳೂರು, ಜು.24: ಪರಿಸರ ರಕ್ಷಣಾ ಕಾಯಿದೆ ಪ್ರಕಾರ ನಿಶ್ಯಬ್ದ ವಲಯಗಳನ್ನು ಗುರುತಿಸುವ ಬಗ್ಗೆ ಕಾಲಮಿತಿಯೊಳಗೆ ಕ್ರಮ ಕೈಗೊಂಡು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಇಂದಿರಾನಗರದ ಪಬ್ ಹಾಗೂ ರೆಸ್ಟೋರೆಂಟ್ಗಳಿಂದ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪೊಲೀಸರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಹೈಕೋರ್ಟ್ ಆದೇಶದಂತೆ ಇಂದಿರಾನಗರದಲ್ಲಿ ಶಬ್ದ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ನ್ಯಾಯಪೀಠಕ್ಕೆ ಪ್ರಗತಿ ವರದಿಯನ್ನು ಸಲ್ಲಿಸಿದರು.
ಪ್ರಗತಿ ವರದಿ ಮಾನ್ಯ ಮಾಡಿದ ನ್ಯಾಯಪೀಠವು ಈ ಆದೇಶವನ್ನು ಹೀಗೆಯೇ ಮುಂದುವರಿಸಿ ಅಲ್ಲದೆ, ನಿಶ್ಯಬ್ದ ವಲಯಗಳನ್ನು ಕಾಲಮಿತಿಯೊಳಗೆ ಗುರುತಿಸಿ ಪ್ರಮಾಣ ಪತ್ರ ಸಲ್ಲಿಸಿ ಎಂದು ನಿರ್ದೇಶಿಸಿತು. ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯಗಳು, ಧಾರ್ಮಿಕ ಸ್ಥಳಗಳನ್ನು ನಿಶ್ಯಬ್ದ ವಲಯಗಳು ಎಂದು ಗುರುತಿಸಲಾಗಿದೆ. ಅದರಂತೆ ಉಳಿದ ನಿಶ್ಯಬ್ದ ವಲಯಗಳನ್ನು ಗುರುತಿಸಬೇಕು. ಅಲ್ಲದೆ, ಜನರು ವಾಸಿಸುವ ಸ್ಥಳಗಳಲ್ಲೂ ಸಮಯ ಮೀರಿ ಶಬ್ದ ಮಾಲಿನ್ಯ ಆಗದಂತೆ ತಡೆಗಟ್ಟಬೇಕೆಂದು ನ್ಯಾಯಪೀಠವು ತಿಳಿಸಿತು. ವಿಚಾರಣೆಯನ್ನು ಆ.16ಕ್ಕೆ ಮುಂದೂಡಿತು.