ಬಿಬಿಎಂಪಿಯಲ್ಲೂ ಆಡಳಿತ ಸೂತ್ರ ಹಿಡಿಯಲು ಬಿಜೆಪಿ ಕಸರತ್ತು
ಬೆಂಗಳೂರು, ಜು.24: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರ ಸೂತ್ರ ಹಿಡಿಯುವುದು ಖಚಿತವಾಗುತ್ತಿದ್ದಂತೆ ಬಿಬಿಎಂಪಿಯಲ್ಲೂ ಕಾಂಗ್ರೆಸ್ ಜೆಡಿಎಸ್ ಆಡಳಿತವನ್ನು ಬಿಜೆಪಿ ಕೊನೆಗಾಣಿಸಿ ಆಡಳಿತ ಸೂತ್ರವನ್ನು ಹಿಡಿಯುವ ಲೆಕ್ಕಾಚಾರ ಆರಂಭವಾಗಿದೆ.
ಕಳೆದ 4 ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಆಡಳಿತವನ್ನು ಕೊನೆಗಾಣಿಸಿ ಕೊನೆಯ ವರ್ಷದಲ್ಲಾದರೂ ಅಧಿಕಾರವನ್ನು ಹಿಡಿಯಬೇಕೆಂಬ ಕಸರತ್ತು ಬಿಜೆಪಿ ವಲಯದಲ್ಲಿ ಆರಂಭವಾಗಿದೆ. ಕಾವೇರಿಪುರಂ ವಾರ್ಡ್ನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸಿದ್ದರಿಂದ ಬಿಜೆಪಿ ಬಲ 102 ಕ್ಕೆ ಏರಿದೆ. ಅಲ್ಲದೇ ಜೆಡಿಎಸ್ನ ಮೂವರು ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದರಿಂದ ಜೆಡಿಎಸ್ನ ಸಂಖ್ಯಾ ಬಲ ಕುಗ್ಗಿದೆ. ಈ ಮೂವರು ಶಾಸಕರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪರ ಮತ ಹಾಕುವುದಿಲ್ಲ, ಇದು ಬಿಜೆಪಿಗೆ ವರದಾನವಾಗಿದೆ.
ಅಷ್ಟೇ ಅಲ್ಲದೇ ಈ ಮೂವರು ಅತೃಪ್ತ ಶಾಸಕರ ಬೆಂಬಲಕ್ಕೆ ಬಿಬಿಎಂಪಿ ಸದಸ್ಯರು ಬಿಜೆಪಿ ಕಡೆ ವಾಲುವ ಸಾಧ್ಯತೆಗಳು ದಟ್ಟವಾಗಿದ್ದು, ಇವರ ಬೆಂಬಲದೊಂದಿಗೆ ಬಿಬಿಎಂಪಿಯಲ್ಲಿ ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದಾಗಿದೆ. ಆದರೆ ಸದ್ಯಕ್ಕಂತೂ ಅಂತಹ ಯಾವುದೇ ಪ್ರಯತ್ನಗಳಿಗೆ ಬಿಜೆಪಿ ನಾಯಕರು ಕೈಹಾಕುವುದಿಲ್ಲ. ಅಲ್ಲದೇ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಆಡಳಿತದ ಮೇಯರ್ ಆಗಿರುವ ಗಂಗಾಂಬಿಕೆ ಮಲ್ಲಿಕಾರ್ಜುನ ಅವರ ಅಧಿಕಾರದ ಅವಧಿ ಸೆಪ್ಟೆಂಬರ್ ಕೊನೆಯ ವಾರದವರೆಗೂ ಇದೆ.
ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದ ಬಿಬಿಎಂಪಿಯಲ್ಲಿ ಮೇಯರ್ ಆಡಳಿತವನ್ನು ಹಿಡಿಯಲು ಬಿಜೆಪಿ ವರಿಷ್ಠರು ಕಸರತ್ತು ನಡೆಸಲಿದ್ದಾರೆ. ಅಲ್ಲಿಯವರೆಗೂ ಯಾವುದೇ ಪ್ರಯತ್ನಗಳಿಗೆ ಕೈಹಾಕದಿರಲು ನಾಯಕರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಸ್ಪೀಕರಿಸಿ ಸಚಿವ ಸಂಪುಟ ರಚಿಸಿ ಸರಕಾರ ಸುಸೂತ್ರವಾಗಿ ಆರಂಭವಾಗಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಸರಕಾರವನ್ನು ರಚಿಸಿ ಒಂದು ಹಂತಕ್ಕೆ ತರುವ ಸಿದ್ಧತೆಯಲ್ಲಿ ನಾಯಕರು ಮುಳುಗುವುದರಿಂದ ಬಿಬಿಎಂಪಿಯಲ್ಲಿ ಆಡಳಿತ ಸೂತ್ರ ಹಿಡಿಯುವ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆಗಳು ಸದ್ಯಕ್ಕಂತೂ ಕಡಿಮೆ. ಸೆಪ್ಟೆಂಬರ್ ಮೊದಲ ವಾರದಿಂದ ಇಂತಹ ಚರ್ಚೆಗಳು ಆರಂಭವಾಗಲಿವೆ.
ಮೇಯರ್ ಸ್ಥಾನಕ್ಕೆ ಪೈಪೋಟಿ
ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಆಡಳಿತವನ್ನು ಕೊನೆಗಾಣಿಸಿ ಅಧಿಕಾರದ ಚುಕ್ಕಾಣಿ ಹಿಡಿದರೆ ಮೇಯರ್ ಪಟ್ಟ ಪಡೆಯಲು ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ಮೇಯರ್ ಆಗಲು ಪದ್ಮನಾಭರೆಡ್ಡಿ, ಎಲ್.ಶ್ರೀನಿವಾಸ್, ಉಮೇಶ್ ಶೆಟ್ಟಿ ನಡುವೆ ತೀವ್ರ ಪೈಪೋಟಿ ನಡೆದಿದೆ.